ವಡೋದರಾ: ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯದಿಂದ ಚೇತರಿಸಿಕೊಂಡಿದ್ದು ಶನಿವಾರ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದರು.
ಹೋದ ವರ್ಷ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡುವಾಗ ಅವರ ಹಿಮ್ಮಡಿಗೆ ಗಾಯವಾಗಿತ್ತು. ಅದರ ನಂತರ ಅವರು ಚಿಕಿತ್ಸೆ ಮತ್ತು ಆರೈಕೆ ಪಡೆಯುತ್ತಿದ್ದರು.
‘17 ವರ್ಷದ ಹಿಂದೆ ನನ್ನ ಕ್ರಿಕೆಟ್ ಪಯಣ ಆರಂಭವಾಗಿದ್ದ ಇದೇ ಕ್ರೀಡಾಂಗಣಕ್ಕೆ ಮರಳಿರುವುದು ಸಂತಸವಾಗುತ್ತಿದೆ’ ಎಂಬ ಹೇಳಿಕೆ ಇರುವ ವಿಡಿಯೊವೊಂದನ್ನು ಹಾರ್ದಿಕ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಗಾಯದಿಂದಾಗಿ ಅವರು ಈಚೆಗೆ ಅಫ್ಗಾನಿಸ್ತಾನ ವಿರುದ್ಧ ನಡೆದ ಟಿ20 ಸರಣಿಯಲ್ಲಿಯೂ ಆಡಿರಲಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ಅವರನ್ನು ಈಚೆಗೆ ನೇಮಕ ಮಾಡಲಾಗಿದೆ. ಅವರು ಹೋದ ಋತುವಿನಲ್ಲಿ ಗುಜರಾತ್ ಟೈಟನ್ಸ್ನಲ್ಲಿ ಆಡಿದ್ದರು. ಈ ವರ್ಷ ಮತ್ತೆ ಮುಂಬೈ ತಂಡಕ್ಕೆ ಮರಳಿದ್ದಾರೆ.