ನವದೆಹಲಿ (ಪಿಟಿಐ): ಮುಂಬರುವ ಅಕ್ಟೋಬರ್–ನವೆಂಬರ್ನಲ್ಲಿ ಭಾರತದಲ್ಲಿಯೇ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸುವ ಕುರಿತು ನಿರ್ಧಾರ ಕೈಗೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಇದೇ 28ರವರೆಗೆ ಕಾಲಾವಕಾಶ ನೀಡಲಾಗಿದೆ.
ಮಂಗಳವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರು ಸಲ್ಲಿಸಿದ ಮನವಿಗೆ ಉತ್ತಮ ಸ್ಪಂದನೆ ದೊರೆಯಿತು.
ಪೂರ್ವನಿಗದಿತ ವೇಳಾಪಟ್ಟಿಯ ಪ್ರಕಾರ ಭಾರತವು ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಬೇಕು. ಆದರೆ, ದೇಶದಲ್ಲಿ ಕೋವಿಡ್ –19 ಎರಡನೇ ಅಲೆಯ ಪ್ರಕರಣಗಳು ಹೆಚ್ಚಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಲಿದೆ ಎಂಬ ಬಗ್ಗೆ ಅನಿಶ್ಚಿತತೆ ಮೂಡಿದೆ.
ಒಂದೊಮ್ಮೆ ಭಾರತದಲ್ಲಿ ಸ್ಥಿತಿ ಹೀಗೆ ಮುಂದುವರಿದರೆ ಟೂರ್ನಿಯನ್ನು ತಟಸ್ಥ ತಾಣಕ್ಕೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ. ಈ ಕುರಿತು ನಿರ್ಧಾರ ಕೈಗೊಳ್ಳಲು ಬಿಸಿಸಿಐ ಸಮಯ ಕೇಳಿತ್ತು.
‘ಮುಂದಿನ ತಿಂಗಳು ಐಸಿಸಿಯ ಸಭೆಯಲ್ಲಿ ಬಿಸಿಸಿಐ ತನ್ನ ನಿರ್ಧಾರವನ್ನು ತಿಳಿಸಬೇಕು. ಅಲ್ಲಿಯವರೆಗೆ ದೇಶದ ಸ್ಥಿತಿ ಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುವುದು‘ ಎಂದು ಬಿಸಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೊಮ್ಮೆ ಭಾರತದಲ್ಲಿ ಆಯೋಜನೆ ಸಾಧ್ಯವಾಗದಿದ್ದರೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದೆ. ಹೋದ ತಿಂಗಳು ಭಾರತದಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಕೆಲವು ಆಟಗಾರರಿಗೆ ಕೋವಿಡ್ ಸೋಂಕು ಖಚಿತವಾಗಿತ್ತು. ಆದ್ದರಿಂದ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತ ಮಾಡಲಾಗಿತ್ತು. ಅದರಲ್ಲಿ ಉಳಿದಿರುವ 31 ಪಂದ್ಯಗಳನ್ನು ಸೆಪ್ಟೆಂಬರ್ನಲ್ಲಿ ಯುಎಇಯಲ್ಲಿ ನಡೆಸಲು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ.