ಬೆಂಗಳೂರು: ಏಕದಿನ ವಿಶ್ವಕಪ್ಗೆ ಘೋಷಿಸಿರುವ ಭಾರತ ತಂಡ ಹೆಚ್ಚು ಸಮತೋಲನದಿಂದ ಕೂಡಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದ್ದಾರೆ.
ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ 15 ಸದಸ್ಯ ಬಳಗದ ಭಾರತ ತಂಡವನ್ನು ಇಂದು (ಮಂಗಳವಾರ) ಘೋಷಿಸಲಾಯಿತು.
ಈ ನಡುವೆ ಕರ್ನಾಟಕದ ಕೆ.ಎಲ್. ರಾಹುಲ್ ಫಿಟ್ನೆಸ್ ಬಗ್ಗೆ ಅನುಮಾನ ಮೂಡಿದ್ದು, ಅವರ ಆಯ್ಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಗರ್ಕರ್, ರಾಹುಲ್ ಫಿಟ್ ಆಗಿದ್ದು, ಅವರ ಆಗಮನದಿಂದ ತಂಡ ಹೆಚ್ಚು ಸಮತೋಲನದಿಂದ ಕೂಡಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ರಾಹುಲ್ ಅಭ್ಯಾಸ ಪಂದ್ಯಗಳನ್ನು ಆಡಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಸಂತುಷ್ಟರಾಗಿದ್ದೇವೆ ಎಂದು ಹೇಳಿದ್ದಾರೆ.
ಸಂಪೂರ್ಣ ಫಿಟ್ ಆಗದ ಕಾರಣ ಏಷ್ಯಾ ಕಪ್ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಿಂದ ರಾಹುಲ್ ಹೊರಗುಳಿದಿದ್ದರು.
ರಾಹುಲ್ ಹೊರತುಪಡಿಸಿ ವಿಕೆಟ್ ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಮಾತನಾಡಿದ ಅಜಿತ್, ಈ ಆರೋಗ್ಯಕರ ಪೈಪೋಟಿ ಉತ್ತಮವಾಗಿದೆ. ಇಶಾನ್ ಇತ್ತೀಚಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಏಕದಿನದಲ್ಲಿ ರಾಹುಲ್ ದಾಖಲೆಯು ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.
ಇಬ್ಬರು ವಿಕೆಟ್ ಕೀಪರ್ಗಳು ನಮ್ಮಲ್ಲಿದ್ದಾರೆ. ಆಡುವ ಬಳಗದಲ್ಲಿ ಸ್ಥಾನಕ್ಕಾಗಿ ಅವರಿಬ್ಬರ ಮಧ್ಯೆ ಸ್ಪರ್ಧೆ ಏರ್ಪಡಲಿದೆ ಎಂದು ತಿಳಿಸಿದ್ದಾರೆ.