ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೀಪನ ಮದ್ದು ಸೇವನೆ ಆರೋಪದಿಂದ ಕ್ಲೀನ್‌ಚಿಟ್‌ ಪಡೆವೆ: ದೇವಿಂದರ್ ಸಿಂಗ ಕಾಂಗ್

ಜಾವೆಲಿನ ಥ್ರೋ ಅಥ್ಲೀಟ್ ದೇವಿಂದರ್ ಸಿಂಗ್ ಕಾಂಗ್ ಭರವಸೆ
Last Updated 14 ಜೂನ್ 2020, 10:59 IST
ಅಕ್ಷರ ಗಾತ್ರ

ನವದೆಹಲಿ: ಗಂಟಲು ನೋವಿನ ಶಮನಕ್ಕೆ ಔಷಧಿ ತೆಗೆದುಕೊಂಡಿದ್ದೆ. ಆದ್ದರಿಂದ ತಮ್ಮ ಮೇಲೆ ಇರುವ ಉದ್ದೀಪನ ಮದ್ದು ಸೇವನೆಯ ಆರೋಪದಲ್ಲಿ ಕ್ಲೀನ್‌ ಚಿಟ್ ಸಿಗಲಿದೆ ಎಂದು ಜಾವೆಲಿನ್ ಥ್ರೋ ಅಥ್ಲೀಟ್ ದೇವಿಂದರ್ ಸಿಂಗ್ ಕಾಂಗ್ ಹೇಳಿದ್ದಾರೆ.

ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಹೋದ ವರ್ಷ ಆಗಸ್ಟ್‌ನಲ್ಲಿ ಅವರಿಂದ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ)ಸಂಗ್ರಹಿಸಲಾಗಿದ್ದ ಮಾದರಿಯ ನಿಷೇಧಿತ ಮದ್ದಿನ ಅಂಶಗಳಿದ್ದವು ಎಂದು ವರದಿಯಾಗಿತ್ತು. ಗಂಟಲು ಮತ್ತು ಶ್ವಾಸಕೋಶಸ ಸೋಂಕು ಇದ್ದವರಿಗೆ ನೀಡುವ ಮದ್ದಿನ ಅಂಶಗಳು ಅವಾಗಿದ್ದವು. ಅದನ್ನು ವೈದ್ಯರ ಸಲಹೆಯ ಮೇರೆಗೆ ಕಾಂಗ್ ಸೇವಿಸಿದ್ದರು.

’ಹೋದ ವರ್ಷ ಇಂಡಿಯನ್ ಗ್ರ್ಯಾನ್‌ಪ್ರೀ ಕೂಟದ ಸಂದರ್ಭದಲ್ಲಿ ನನಗೆ ವಿಪರೀತ ಗಂಟಲುನೋವು ಇತ್ತು. ಪಟಿಯಾಲದಲ್ಲಿದ್ದ ನನ್ನ ಆಪ್ತ ವೈದ್ಯರಿಗೆ ತಿಳಿಸಿದ್ದೆ. ಅವರು ಮಾಕ್ಸಿಟಸ್ 500 ಮತ್ತು ಬೀಟಾ ಡೆಕ್ಸಾಮೆತಾಸೊನ್ ಗುಳಿಗೆಗಳನ್ನು ಸಲಹೆ ಮಾಡಿದ್ದರು. ಅವುಗಳನ್ನು ಸ್ಪರ್ಧೆಯಿಂದ ಹೊರಗಿದ್ದಾಗ ತೆಗೆದುಕೊಂಡಿದ್ದೆ. ನಂತರ ತೆಗೆದುಕೊಂಡ ಮಾದರಿಯಲ್ಲಿ ಆ ಅಂಶಗಳು ಪತ್ತೆಯಾಗಿರಬಹುದು‘ ಎಂದು ಕಾಂಗ್ ವಿವರಿಸಿದ್ದಾರೆ.

’ನಾಡಾ ಅಧಿಕಾರಿಗಳು ನನ್ನ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿಯೇ ಈ ವಿಷಯವನ್ನು ಅವರಿಗೆ ತಿಳಿಸಿದ್ದೆ. ಪೂರ್ಣ ವಿವರಗಳನ್ನೂ ನೀಡಿ್ದೆ. ಆ ಮದ್ದುಗಳಿಂದ ನನ್ನ ಸ್ಪರ್ಧೆಯಲ್ಲಿ ಯಾವುದೇ ಸಹಾಯವಾಗಿಲ್ಲ. ಆದ್ದರಿಂದ ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಶೀಘ್ರವೇ ನನ್ನನ್ನು ದೋಷಮುಕ್ತಗೊಳಿಸಬಹುದು‘ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

’ಪಟಿಯಾಲದಲ್ಲಿ ನಡೆದಿದ್ದ ಗ್ರ್ಯಾನ್‌ಪ್ರೀ ಕೂಟದಲ್ಲಿ ಒಬ್ಬ ಅಥ್ಲೀಟ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ದೃಢಪಟ್ಟಿದೆ. ದೋಹಾದಲ್ಲಿರುವ ಪ್ರಯೋಗಾಲಯವು ಪರೀಕ್ಷೆ ನಡೆಸಿ ವರದಿ ನೀಡಿದೆ‘ ಎಂದು ನಾಡಾದ ಮಹಾಪ್ರಬಂಧಕ ನವೀನ್ ಅಗರವಾಲ್ ಟ್ವೀಟ್ ಮಾಡಿದ್ದರು.

ಪ್ರಸ್ತುತ ಭಾರತದ ಅಥ್ಲೀಟ್‌ಗಳ ಮೂತ್ರ ಮತ್ತು ರಕ್ತದ ಮಾದರಿಗಳನ್ನು ದೋಹಾದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿದೆ. ಭಾರತದಲ್ಲಿರುವ ನಾಡಾದ ಪ್ರಯೋಗಾಲಯವನ್ನು ಹೋದ ವರ್ಷ ವಾಡಾ ಅಮಾನತು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT