IPL 2021: ಸಿಎಸ್ಕೆ ಪಂದ್ಯವೂ ಮುಂದೂಡಿಕೆ, ಐಪಿಎಲ್ ಮುಂಬೈಗೆ ಸ್ಥಳಾಂತರ?

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿರುವ ಕಾರಣ ನಾಳೆಯ (ಬುಧವಾರ) ಐಪಿಎಲ್ ಪಂದ್ಯವೂ ಮುಂದೂಡಿಕೆಯಾಗಿದೆ.
ನಿಗದಿಯಂತೆ ನಾಳೆ ಸಿಎಸ್ಕೆ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ಆರ್) ನಡುವೆ ಪಂದ್ಯ ನಡೆಯಬೇಕಿದೆ.
ಪಂದ್ಯವನ್ನು ಮರುನಿಗದಿ ಮಾಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಮೂಲಗಳು ಖಚಿತಪಡಿಸಿರುವುದಾಗಿ ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಟೂರ್ನಿಯನ್ನು ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಸರ್ಕಾರದ ಅನುಮತಿ ಕೋರಿದ್ದು, ಕಾಯಲಾಗುತ್ತಿದೆ ಎಂದು ‘ಎಎನ್ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಓದಿ: ಐಪಿಎಲ್ ಬಯೊಬಬಲ್ನಲ್ಲಿ ಕೋವಿಡ್ ಆತಂಕ
ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಉಲ್ಪಣಗೊಂಡಿರುವುದರಿಂದ ಎಲ್ಲ ಪಂದ್ಯಗಳನ್ನೂ ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗಿದೆ ಎಂಬ ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.
‘ಈವರೆಗಿನ ಮಾಹಿತಿ ಪ್ರಕಾರ, ಇಂದಿನ (ಮಂಗಳವಾರ) ಮುಂಬೈ ಇಂಡಿಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ನಡೆಯಲಿದೆ. ಆದರೆ ನಾಳೆಯ ಪಂದ್ಯ ಮುಂದೂಡಿಕೆಯಾಗಬಹುದು. ಕೆಕೆಆರ್ ಮತ್ತು ಸಿಎಸ್ಕೆ ತಂಡಗಳಲ್ಲಿ ಈವರೆಗೆ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಓದಿ: ಹ್ಯಾಟ್ರಿಕ್ ಜಯದ ಕನಸಿನಲ್ಲಿ ಮುಂಬೈ
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದರಿಂದ ಸೋಮವಾರ ನಡೆಯಬೇಕಿದ್ದ ಆರ್ಸಿಬಿ–ಕೆಕೆಆರ್ ನಡುವಣ ಪಂದ್ಯ ಮುಂದೂಡಿಕೆಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.