ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ವಿದ್ವತ್ ಕಾವೇರಪ್ಪಗೆ ಐದು ವಿಕೆಟ್

ಕರ್ನಾಟಕ ತಂಡಕ್ಕೆ ಜಯ; ಶ್ರೇಯಸ್ ಬ್ಯಾಟಿಂಗ್
Last Updated 16 ಅಕ್ಟೋಬರ್ 2022, 15:45 IST
ಅಕ್ಷರ ಗಾತ್ರ

ಚಂಡೀಗಡ: ಐದು ವಿಕೆಟ್‌ಗಳ ಗೊಂಚಲು ಗಳಿಸಿದ ವಿದ್ವತ್ ಕಾವೇರಪ್ಪ ಹಾಗೂ ಚೆಂದದ ಬ್ಯಾಟಿಂಗ್ ಮಾಡಿದ ಶ್ರೇಯಸ್ ಗೋಪಾಲ್, ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಜಮ್ಮು –ಕಾಶ್ಮೀರ್ ವಿರುದ್ಧ ಕರ್ನಾಟಕ್ಕೆ ಜಯದ ಕಾಣಿಕೆ ನೀಡಿದರು.

ಟಾಸ್ ಗೆದ್ದ ಕರ್ನಾಟಕದ ನಾಯಕ ಮಯಂಕ್ ಅಗರವಾಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮಯಂಕ್ ಸೇರಿದಂತೆ ಐವರು ಬ್ಯಾಟರ್‌ಗಳಲ್ಲಿ ಕೇವಲ 59 ರನ್‌ಗಳಿಸಿದ್ದಾಗ ಔಟಾದರು. ಈ ಹೊತ್ತಿನಲ್ಲಿ ಶ್ರೇಯಸ್ (ಅಜೇಯ 48; 38ಎ, 4X4, 6X1) ಹಾಗೂ ಮನೋಜ್ ಬಾಂಢಗೆ (41; 23ಎ, 4X2, 4X6) ಆರನೇ ವಿಕೆಟ್ ಜೊತೆಯಾಟದಲ್ಲಿ 61 ರನ್‌ ಗಳಿಸಿದರು. ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 7ಕ್ಕೆ147 ರನ್‌ಗಳ ಗೌರವಯುತ ಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ಜಮ್ಮು–ಕಾಶ್ಮೀರ ತಂಡಕ್ಕೆ ನವಪ್ರತಿಭೆ ವಿದ್ವತ್ (3.2–0–11–5) ಬರಸಿಡಿಲಿನಂತೆ ಎರಗಿದರು. ಅವರ ಸ್ವಿಂಗ್ ದಾಳಿಯ ಮುಂದೆ ಕಣಿವೆ ರಾಜ್ಯವು 18.2 ಓವರ್‌ಗಳಲ್ಲಿ 113 ರನ್‌ ಗಳಿಸಿ ಆಲೌಟ್ ಆಯಿತು. ಕೊಡಗಿನ ಹುಡುಗ ವಿದ್ವತ್‌ಗೆ ಇದೇ ಮೊದಲ ಟಿ20 ಟೂರ್ನಿ ಆಗಿದೆ. ಮಹಾರಾಷ್ಟ್ರ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಬಲಗೈ ಮಧ್ಯಮವೇಗಿಗೆ ಇದು ನಾಲ್ಕನೇ ಪಂದ್ಯ.

ಮಯಂಕ್ ಬಳಗಕ್ಕೆ ಟೂರ್ನಿಯಲ್ಲಿ ಇದು ಮೂರನೇ ಜಯ. ಒಟ್ಟು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಕರ್ನಾಟಕ ತಂಡವು ಅರುಣಾಚಲ ಪ್ರದೇಶವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು
ಕರ್ನಾಟಕ:
20 ಓವರ್‌ಗಳಲ್ಲಿ 7ಕ್ಕೆ147 (ದೇವದತ್ತ ಪಡಿಕ್ಕಲ್ 22, ಲವನಿತ್ ಸಿಸೊಡಿಯಾ 20, ಶ್ರೇಯಸ್ ಗೋಪಾಲ್ 48, ಮನೋಜ್ ಭಾಂಡಗೆ 41, ಅಬಿದ್ ಮುಷ್ತಾಕ್ 16ಕ್ಕೆ2, ರಿತಿಕ್ ಸಿಂಗ್ 16ಕ್ಕೆ2)

ಜಮ್ಮು–ಕಾಶ್ಮೀರ: 18.2 ಓವರ್‌ಗಳಲ್ಲಿ 113 (ವಿವ್ರಾಂತ್ ಶರ್ಮಾ 63, ಅಬಿದ್ ಮುಷ್ತಾಕ್ 32, ವಿದ್ವತ್ ಕಾವೇರಪ್ಪ 11ಕ್ಕೆ5, ವಾಸುಕಿ ಕೌಶಿಕ್ 32ಕ್ಕೆ2, ವಿಜಯಕುಮಾರ್ ವೈಶಾಖ್ 15ಕ್ಕೆ2)

ಫಲಿತಾಂಶ: ಕರ್ನಾಟಕ ತಂಡಕ್ಕೆ 34 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT