ಮೈಸೂರು: ನಾಯಕ ಭರತ್ ಚಿಪ್ಲಿ ಮತ್ತು ಎಂ.ಜಿ.ನವೀನ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಒಂಬತ್ತು ವಿಕೆಟ್ಗಳಿಂದ ಗೆದ್ದ ಬಿಜಾಪುರ ಬುಲ್ಸ್ ತಂಡ ಕೆಪಿಎಲ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ನಡೆಯಲಿರುವ ಫೈನಲ್ನಲ್ಲಿ ಬುಲ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಪೈಪೋಟಿ ನಡೆಸಲಿದೆ.
ಬುಧವಾರ ನಡೆದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೈಗರ್ಸ್ 20 ಓವರ್ಗಳಲ್ಲಿ 7 ವಿಕೆಟ್ಗೆ 134 ರನ್ ಗಳಿಸಿದರೆ, ಬುಲ್ಸ್ ತಂಡ 14.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.
ಆರ್.ವಿನಯ್ ಕುಮಾರ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗದ ಮೇಲೆ ದಂಡೆತ್ತಿ ಹೋದ ಚಿಪ್ಲಿ (73, 46 ಎಸೆತ, 9 ಬೌಂ, 3 ಸಿ.) ಮತ್ತು ನವೀನ್ (ಔಟಾಗದೆ 62, 43 ಎಸೆತ) ತಂಡಕ್ಕೆ ನಿರಾಯಾಸ ಜಯ ತಂದಿತ್ತರು.
ಎದುರಾಳಿ ತಂಡವನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿ ಬ್ಯಾಟ್ಸ್ಮನ್ಗಳ ಮೇಲಿನ ಹೊರೆಯನ್ನು ತಗ್ಗಿಸಿದ ಬುಲ್ಸ್ ತಂಡದ ಬೌಲರ್ಗಳಿಗೂ ಗೆಲುವಿನ ಶ್ರೇಯ ಸಲ್ಲಬೇಕು.
ಮೊದಲು ಬ್ಯಾಟ್ ಮಾಡಿದ ಟೈಗರ್ಸ್ ಉತ್ತಮ ಆರಂಭದ ಹೊರತಾಗಿಯೂ ಸವಾಲಿನ ಮೊತ್ತ ಪೇರಿಸಲು ವಿಫಲ ವಾಯಿತು. ಸ್ಪಿನ್ನರ್ ಕೆ.ಪಿ.ಅಪ್ಪಣ್ಣ, ಕೆ.ಸಿ.ಕಾರ್ಯಪ್ಪ ಮತ್ತು ನವೀನ್ ಪ್ರಭಾವಿ ಬೌಲಿಂಗ್ ಮಾಡಿದರು.