ನಾಗೋಠಾಣೆ, ಮಹಾರಾಷ್ಟ್ರ: ನಿಕಿನ್ ಜೋಸ್ (178) ಅವರ ಮತ್ತು ಎನ್.ಜಯೇಶ್ (109) ಅವರ ಭರ್ಜರಿ ಶತಕಗಳ ನೆರವಿನಿಂದ ಕರ್ನಾಟಕ ತಂಡ, ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 50 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು.
ರಿಲಯನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದ ಮೂರನೇ ದಿನವಾದ ಶನಿವಾರ, ಮಹಾರಾಷ್ಟ್ರದ 367 ರನ್ಗಳಿಗೆ ಉತ್ತರವಾಗಿ ಕರ್ನಾಟಕ (ಶುಕ್ರವಾರ: 1 ವಿಕೆಟ್ಗೆ 235), ಚಹ ವಿರಾಮದ ಆರು ಓವರುಗಳ ನಂತರ 417 ರನ್ಗಳಿಗೆ ಆಲೌಟ್ ಆಯಿತು.
ಆರಂಭ ಆಟಗಾರ ಜೋಸ್ ಮತ್ತು ಜಯೇಶ್ ಮೂರನೇ ವಿಕೆಟ್ಗೆ 247 ರನ್ಗಳ ಭರ್ಜರಿ ಜೊತೆಯಾಟವಾಡಿ ಕರ್ನಾಟಕವನ್ನು ಮುನ್ನಡೆಯ ಹಾದಿಗೆ ಒಯ್ದರು. 308 ಎಸೆತಗಳ ಆಟದಲ್ಲಿ ಜೋಸ್ 21 ಬೌಂಡರಿಗಳನ್ನು ಬಾರಿಸಿದರೆ, ಜಯೇಶ್ ಅವರ ಶತಕದಲ್ಲಿ 13 ಬೌಂಡರಿಗಳಿದ್ದವು.
ಎರಡನೇಯವರಾಗಿ ಜಯೇಶ್ ನಿರ್ಗಮಿಸಿದ (2 ವಿಕೆಟ್ಗೆ 333) ನಂತರ 84 ರನ್ಗಳ ಅಂತರದಲ್ಲಿ ಎಂಟು ವಿಕೆಟ್ಗಳು ಬಿದ್ದವು.