ನವದೆಹಲಿ: ಭಾರತ ತಂಡದ ಕೋಚ್ ಆಯ್ಕೆ ಮಾಡಿದ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಆಯ್ಕೆ ಸಮಿತಿಗೆ ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆ ನೋಟಿಸ್ ನೀಡಲಾಗಿದೆ.
ಸಮಿತಿಯಲ್ಲಿದ್ದ ಕಪಿಲ್ ದೇವ್, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರಿಗೆ ನೀತಿ ಅಧಿಕಾರಿ ಡಿ.ಕೆ. ಜೈನ್ ನೋಟಿಸ್ ನೀಡಿದ್ದಾರೆಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ.ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಆಜೀವ ಸದಸ್ಯ ಸಂಜೀವ್ ಗುಪ್ತಾ ಅವರು ಈ ಮೂವರ ಮೇಲೆ ದೂರು ನೀಡಿದ್ದರು.
‘ಕಪಿಲ್ ದೇವ್ ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿದ್ದಾರೆ. ಫ್ಲಡ್ಲೈಟ್ ಕಂಪನಿಯ ಮಾಲೀಕ ಮತ್ತು ಭಾರತೀಯ ಕ್ರಿಕೆಟಿಗರ ಸಂಸ್ಥೆಯ ಸದಸ್ಯರಾಗಿದ್ದಾರೆ. ಅನ್ಷುಮನ್ ಅವರು ಸ್ವಂತ ತರಬೇತಿ ಅಕಾಡೆಮಿ ಹೊಂದಿದ್ದಾರೆ. ಬಿಸಿಸಿಐ ಮಾನ್ಯತಾ ಸಮಿತಿಯ ಸದಸ್ಯರಾಗಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ಅವರು ಐಸಿಎನಲ್ಲಿದ್ದಾರೆ’ ಎಂದು ಗುಪ್ತಾ ದೂರಿದ್ದಾರೆ.
ಈಚೆಗೆ ಭಾರತ ತಂಡಕ್ಕೆ ರವಿಶಾಸ್ತ್ರಿ ಅವರನ್ನು ಮುಖ್ಯ ಕೋಚ್ ಆಗಿ ಕಪಿಲ್ ಸಮಿತಿಯು ಆಯ್ಕೆ ಮಾಡಿತ್ತು.