ಶ್ರೀನಿವಾಸಪುರ: ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಕಾಡು ಮೇಡು ಸುತ್ತುವುದರ ಮೂಲಕ ಪರಿಸರ ಜ್ಞಾನ ಪಡೆಯಬೇಕು ಎಂದು ಪರಿಸರ ತಜ್ಞ ಪಿ.ವಿ.ರಾಜಾರೆಡ್ಡಿ ಸಲಹೆ ನೀಡಿದರು.
ತಾಲ್ಲೂಕಿನ ರಾಯಲ್ಪಾಡ್ ಸಮೀಪದ ನೀಲ್ ಬಾಗ್ ಶಾಲೆಯಲ್ಲಿ ಹಸಿರುಹೊನ್ನು ಬಳಗದ ಹಸಿರು ಮಡಿಲು ಯೋಜನೆಯಡಿ ಶನಿವಾರ ಏರ್ಪಡಿಸಿದ್ದ ‘ಸಸ್ಯ ದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಗ್ರಾಮೀಣ ಪ್ರದೇಶದ ಹಿರಿಯರು ಮಕ್ಕಳಿಗೆ ಸಸ್ಯಗಳ ಪರಿಚಯ ಮಾಡಿಕೊಡಬೇಕು. ನಮ್ಮ ನಡುವೆ ಅದೆಷ್ಟೋ ಉಪಯುಕ್ತ ಸಸ್ಯಗಳಿವೆ. ಅವುಗಳಲ್ಲಿ ಗಿಡಮೂಲಿಕೆಗಳಿವೆ. ನಮ್ಮ ಪೂರ್ವಿಕರಿಗೆ ಅವುಗಳ ಸಂಪೂರ್ಣ ಜ್ಞಾನ ಇತ್ತು. ಹಲವು ರೋಗಗಳಿಗೆ ಹತ್ತಿರದಲ್ಲೇ ಪರಿಹಾರ ಕಂಡುಕೊಳ್ಳುತ್ತಿದ್ದರು’ ಎಂದರು.
‘ಸಸ್ಯ ಜನ್ಯ ಔಷಧ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ. ಕಾಲಾಂತರದಲ್ಲಿ ಅವುಗಳನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಇಂಗ್ಲಿಷ್ ಔಷಧಗಳ ಬಳಕೆ ಹೆಚ್ಚಿತು. ಈಗ ಅದರ ದುಷ್ಪರಿಣಾಮ ಎದುರಿಸುವಂತಾಗಿದೆ’ ಎಂದು ಹೇಳಿದರು.
ಕಕ್ಕೆ ಗಿಡ ಒಂದು ಔಷಧೀಯ ಸಸ್ಯವಾಗಿದೆ. ಎಲೆ, ಚಕ್ಕೆ, ಕಾಯಿ ಹಾಗೂ ಬೇರು ಔಷಧವಾಗಿ ಬಳಕೆಯಾಗುತ್ತಿದೆ. ಹೂವಿನ ಸೌಂದರ್ಯ ಹಾಗೂ ಸುವಾಸನೆ ಮನಸ್ಸಿಗೆ ಮುದ ನೀಡುತ್ತದೆ ಎಂದು ಹೇಳಿದರು. ಔಷಧೀಯ ಸಸ್ಯಗಳ ಪರಿಚಯ ಮಾಡಿಕೊಟ್ಟರು.
ಶಿಕ್ಷಕರಾದ ಶಿವಾರೆಡ್ಡಿ, ಬಾನು ತಾಜ್, ಸಹಾಯಕಿ ಪಾಲೆಮ್ಮ ಇದ್ದರು.