ಮುಂಬೈ: ಗೆಲ್ಲಲೇ ಬೇಕಾದ ಒತ್ತಡವೇ ತಂಡದ ಲೀಗ್ ಪಂದ್ಯದಲ್ಲಿ ಸೋಲಿಗೆ ಕಾರಣ ಎಂದು ಕೋಲ್ಕತ್ತ ನೈಟ್ ರೈಡರ್ಸ್ನ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ಅಭಿಪ್ರಾಯಪಟ್ಟರು. ಭಾನುವಾರ ರಾತ್ರಿ ಇಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಕೋಲ್ಕತ್ತ ತಂಡ ಮುಂಬೈ ಇಂಡಿಯನ್ಸ್ ಎದುರು ಒಂಬತ್ತು ವಿಕೆಟ್ಗಳಿಂದ ಸೋತಿತ್ತು.
‘ಲೀಗ್ ಹಂತದಲ್ಲಿ ಸತತ ಸೋಲುಗಳು ತಂಡವನ್ನು ಕಾಡಿದ್ದವು. ಹೀಗಾಗಿ ಕೊನೆಯಲ್ಲಿ ಒತ್ತಡ ಹೆಚ್ಚಾಗಿತ್ತು. ಕೊನೆಯ ಪಂದ್ಯದಲ್ಲಿ ಕಣಕ್ಕೆ ಇಳಿಯುವಾಗ ಪಾಯಿಂಟ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಬೇಕಾದ ಅನಿವಾರ್ಯ ಸ್ಥಿತಿಯಲ್ಲಿತ್ತು ತಂಡ. ಈ ಒತ್ತಡವನ್ನು ಮೆಟ್ಟಿನಿಲ್ಲಲು ಆಟಗಾರರಿಗೆ ಸಾಧ್ಯವಾಗಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ಭಾನುವಾರ ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಕೇವಲ 133 ರನ್ ಗಳಿಸಿತ್ತು. ಕ್ರಿಸ್ ಲಿನ್ (41) ಮತ್ತು ರಾಬಿನ್ ಉತ್ತಪ್ಪ (40) ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ಮಿಂಚಲು ಆಗಲಿಲ್ಲ.
ಗುರಿ ಬೆನ್ನತ್ತಿದ್ದ ಮುಂಬೈ ಕೇವಲ ಒಂದು ವಿಕೆಟ್ ಕಳೆದುಕೊಂಡು 16.1 ಓವರ್ನಲ್ಲಿ ಜಯ ಗಳಿಸಿತ್ತು. ಕ್ವಿಂಟನ್ ಡಿ ಕಾಕ್ (30) ಔಟಾದ ನಂತರ ನಾಯಕ ರೋಹಿತ್ ಶರ್ಮಾ (55; 48 ಎಸೆತ, 8 ಬೌಂಡರಿ) ಮತ್ತು ಸೂರ್ಯಕುಮಾರ್ ಯಾದವ್ (46; 27 ಎ, 2 ಸಿ, 5 ಬೌಂ) ಅಜೇಯ 88 ರನ್ ಗಳಿಸಿದ್ದರು.
‘ಐಪಿಎಲ್ನಂಥ ಮಹತ್ವದ ಟೂರ್ನಿಗಳಲ್ಲಿ ಒಗ್ಗಟ್ಟು ಮುಖ್ಯ. ನಮ್ಮ ತಂಡದಲ್ಲಿ ಅದು ಇತ್ತು. ಆದರೆ ಕೊನೆಯಲ್ಲಿ ಸೋಲಿನೊಂದಿಗೆ ಹೊರಬೀಳಬೇಕಾಯಿತು’ ಎಂದು ಅವರು ಹೇಳಿದರು.