ಪಾಲ್ಗರ್ (ಮಹಾರಾಷ್ಟ್ರ): ಲಾಕ್ಡೌನ್ ಕಾರಣ ಎರಡು ತಿಂಗಳ ಕಾಲ ‘ಗೃಹ ಬಂಧನ’ದಲ್ಲಿದ್ದ ಭಾರತ ಕ್ರಿಕೆಟ್ ತಂಡದ ಮಧ್ಯಮ ವೇಗದ ಬೌಲರ್ ಶಾರ್ದೂಲ್, ಶನಿವಾರ ಅಭ್ಯಾಸ ನಡೆಸಿದ್ದಾರೆ.
ಕೇಂದ್ರ ಸರ್ಕಾರವು ಕ್ರೀಡಾ ಚಟುವಟಿಕೆಗಳ ಮೇಲಿನ ನಿರ್ಬಂಧ ಸಡಿಲಿಸಿದ ಬಳಿಕ ಹೊರಾಂಗಣ ಕ್ರೀಡಾಂಗಣದಲ್ಲಿ ತಾಲೀಮು ನಡೆಸಿದ ಭಾರತದ ಮೊದಲ ಕ್ರಿಕೆಟಿಗ ಅವರಾಗಿದ್ದಾರೆ.
ಬೊಯಿಸರ್ನಲ್ಲಿರುವ ಪಾಲ್ಗರ್ ದಹನು ತಾಲ್ಲೂಕ್ ಕ್ರೀಡಾ ಸಂಸ್ಥೆಯ ಮೈದಾನದಲ್ಲಿ ಶಾರ್ದೂಲ್ ಅವರು ಅಭ್ಯಾಸ ಮಾಡಿದರು. ಮುಂಬೈ ತಂಡದ ಬ್ಯಾಟ್ಸ್ಮನ್ ಹಾರ್ದಿಕ್ ತೋಮರ್ ಸೇರಿದಂತೆ ಇತರೆ ಕೆಲ ಆಟಗಾರರೂ ನೆಟ್ಸ್ನಲ್ಲಿ ಬೆವರು ಸುರಿಸಿದರು.
‘ಎರಡು ತಿಂಗಳ ನಂತರ ಮೈದಾನದಲ್ಲಿ ಅಭ್ಯಾಸ ನಡೆಸಿದ್ದು ಖುಷಿ ನೀಡಿತು’ ಎಂದು ಶಾರ್ದೂಲ್ ತಿಳಿಸಿದ್ದಾರೆ.
‘ಅಭ್ಯಾಸದಲ್ಲಿ ಪಾಲ್ಗೊಂಡ ಎಲ್ಲಾ ಆಟಗಾರರನ್ನೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಯಿತು. ಬೌಲರ್ಗಳು ತಾವು ತಂದಿದ್ದ ಚೆಂಡಿನಿಂದಲೇ ಅಭ್ಯಾಸ ನಡೆಸಿದರು. ಅವುಗಳಿಗೆ ಸೋಂಕು ನಿವಾರಕಗಳನ್ನೂ ಸಿಂಪಡಿಸಲಾಗಿತ್ತು. ಅಭ್ಯಾಸದ ವೇಳೆ ಎಲ್ಲರೂ ಅಂತರ ಕಾಪಾಡಿಕೊಂಡರು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.