ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಬಹುಕಾಲ ಜೊತೆಯಾಗಿ ಆಡಿದ್ದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಬುಧವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಭೇಟಿಯಾಗಲಿದ್ದಾರೆ.
ಬಿಸಿಸಿಐನ ಅಧ್ಯಕ್ಷರಾದ ನಂತರ ಇದೇ ಮೊದಲ ಸಲ ಗಂಗೂಲಿ ಅವರು ಎನ್ಸಿಎಗೆ ಭೇಟಿ ನೀಡುತ್ತಿದ್ದಾರೆ. ಅಕಾಡೆಮಿಯ ಮುಖ್ಯಸ್ಥರಾಗಿ ಹೋದ ಜುಲೈನಲ್ಲಿ ಅಧಿಕಾರ ವಹಿಸಿಕೊಂಡಿರುವ ದ್ರಾವಿಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಈ ಸಂದರ್ಭದಲ್ಲಿ ಬಿಸಿಸಿಐನ ನೂತನ ಪದಾಧಿಕಾರಿಗಳು ಹಾಜರಿರುವರು. ಎನ್ಸಿಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತೂಫಾನ್ ಘೋಷ್ ಕೂಡ ಹಾಜರಿರುವರು. ಈ ಸಭೆಯಲ್ಲಿ ಎನ್ಸಿಎಯ ಸುಧಾರಣೆ ಮತ್ತು ಮುಂದಿನ ಯೋಜನೆಗಳ ರೂಪುರೇಷೆಯ ಕುರಿತು ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.