ಲಾಡೆರ್ಹಿಲ್, ಅಮೆರಿಕ: ಮತ್ತೊಮ್ಮೆ ಬೆಳಗಿದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು ವೆಸ್ಟ್ ಇಂಡೀಸ್ ಎದುರಿನ ಐದನೇ ಟಿ20 ಪಂದ್ಯದಲ್ಲಿ ಹೋರಾಟ ಮೊತ್ತ ಗಳಿಸಿತು.
ಭಾನುವಾರ ನಡೆದ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡವು ಆರಂಭದಲ್ಲಿಯೇ ಪೆಟ್ಟು ತಿಂದಿತು. ಆದರೆ ಸೂರ್ಯಕುಮಾರ್ ಯಾದವ್ (61; 45ಎ, 4X4, 6X3) ಅವರ ಅರ್ಧಶತಕದ ಬಲದಿಂದ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 169 ರನ್ ಗಳಿಸಲು ಸಾಧ್ಯವಾಯಿತು.
ಆತಿಥೇಯ ತಂಡದ ಅಕಿಲ್ ಹುಸೇನ್ ಮೊದಲ ಓವರ್ನಲ್ಲಿಯೇ ಯಶಸ್ವಿ ಜೈಸ್ವಾಲ್ ವಿಕೆಟ್ ಗಳಿಸಿದರು. ಮೂರನೇ ಓವರ್ನಲ್ಲಿ ಅಕಿಲ್ ಬೌಲಿಂಗ್ನಲ್ಲಿ ಶುಭಮನ್ ಗಿಲ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.
ಈ ಹಂತದಲ್ಲಿ ಕ್ರೀಸ್ನಲ್ಲಿದ್ದ ಸೂರ್ಯ ಅವರೊಂದಿಗೆ ಸೇರಿದ ತಿಲಕ್ ವರ್ಮಾ (27; 18ಎ, 4X3, 6X2) ತಂಡಕ್ಕೆ ತುಸು ಚೇತರಿಕೆ ನೀಡಿದರು.
ರಾಷ್ಟನ್ ಚೇಸ್ ಎಂಟನೇ ಓವರ್ನಲ್ಲಿ ವರ್ಮಾ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ನಂತರ ಬಂದ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. ಆದರೆ ಸೂರ್ಯ ಮಾತ್ರ ಅಬ್ಬರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 14 ರನ್ ಗಳಿಸಿದರು. ಅದರಲ್ಲಿ ಒಂದು ಸಿಕ್ಸರ್ ಸೇರಿತ್ತು.
ಈ ನಡುವೆ ಮಳೆ ಬಂದ ಕಾರಣ ಕೆಲಹೊತ್ತು ಪಂದ್ಯ ಸ್ಥಗಿತವಾಗಿತ್ತು.