ನವದೆಹಲಿ: ರಾಂಚಿಯಲ್ಲಿ ಈಚೆಗೆ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಆರ್ಮಿ ಕ್ಯಾಪ್ ಧರಿಸಲು ಬಿಸಿಸಿಐ ಅನುಮತಿ ಪಡೆದಿತ್ತು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸ್ಪಷ್ಟಪಡಿಸಿದೆ.
ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ವಿರಾಟ್ ಕೊಹ್ಲಿ ಬಳಗವು ಆರ್ಮಿ ಕ್ಯಾಪ್ ಧರಿಸಿ ಪಂದ್ಯದಲ್ಲಿ ಆಡಿತ್ತು. ಆಟಗಾರರು ಆ ಪಂದ್ಯದ ಸಂಭಾವನೆಯನ್ನೂ ಭಾರತೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಿತ್ತು.
ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪದಾಧಿಕಾರಿಗಳು ಮತ್ತು ಪಾಕ್ ಸಚಿವರೊಬ್ಬರು ಭಾರತದ ಆಟಗಾರರು ಯೋಧರ ಕ್ಯಾಪ್ ಧರಿಸಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದರು. ಅದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಐಸಿಸಿಗೆ ಪತ್ರ ಕೂಡ ಬರೆದಿದ್ದರು.
‘ಯೋಧರ ಕ್ಯಾಪ್ ಧರಿಸಲು ಬಿಸಿಸಿಐ ಮೊದಲೇ ಅನುಮತಿ ಪಡೆದುಕೊಂಡಿತ್ತು ’ ಎಂದು ಐಸಿಸಿಯ ಸ್ಟ್ರ್ಯಾಟರ್ಜಿ ಕಮ್ಯೂನಿಕೇಷನ್ಸ್ ಪ್ರಧಾನ ವ್ಯವಸ್ಥಾಪಕ ಕ್ಲೇರ್ ಫರ್ಲಾಂಗ್ ತಿಳಿಸಿದ್ದಾರೆ.