ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್‌: ಭಾರತಕ್ಕೆ ಗೆಲುವು ಸಾಧಿಸುವ ಸವಾಲು

Last Updated 13 ಜನವರಿ 2019, 17:33 IST
ಅಕ್ಷರ ಗಾತ್ರ

ಶಾರ್ಜಾ: ಮೊದಲ ಎರಡು ಪಂದ್ಯಗಳಲ್ಲಿ ಮಿಶ್ರ ಫಲ ಕಂಡ ಭಾರತ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಸೋಮವಾರ ಬಹರೇನ್ ಎದುರು ಸೆಣಸಲಿದೆ.

ಎಂಟು ವರ್ಷಗಳ ನಂತರ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದ ಭಾರತ ಮೊದಲ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ಎದುರು 4–1ರಿಂದ ಗೆದ್ದು ಶುಭಾರಂಭ ಮಾಡಿತ್ತು. ಈ ಬಾರಿ ಭಾರತ ಉತ್ತಮ ಸಾಮರ್ಥ್ಯ ತೋರುವ ಸೂಚನೆ ಇದು ಎಂದು ಫುಟ್‌ಬಾಲ್ ಪಂಡಿತರು ವಿಶ್ಲೇಷಿಸಿದ್ದರು. ಆದರೆ ನಾಲ್ಕೇ ದಿನಗಳಲ್ಲಿ ಸುನಿಲ್ ಚೆಟ್ರಿ ಬಳಗ ತೀವ್ರ ನಿರಾಸೆಗೆ ಒಳಗಾಯಿತು.

ಆತಿಥೇಯ ಯುಎಇ ಎದುರಿನ ಪಂದ್ಯದಲ್ಲಿ 0–2ರಿಂದ ಸೋತ ತಂಡದ ನಾಕೌಟ್ ಹಂತದ ಹಾದಿ ಈಗ ಕಠಿಣವಾಗಿದೆ.ಬಹರೇನ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು ವಿಫಲವಾದರೆ ತಂಡದ ಕ್ವಾರ್ಟರ್‌ ಫೈನಲ್ ಹಾದಿ ಬಹತೇಕ ಮುಚ್ಚಿದಂತೆ ಆಗಲಿದೆ.

ಥಾಯ್ಲೆಂಡ್ ಎದುರು ಭಾರತ ಅಮೋಘ ಆಟ ಆಡಿತ್ತು. ಬಲಿಷ್ಠ ಆಕ್ರಮಣ ವಿಭಾಗವನ್ನು ಹೊಂದಿರುವ ಆ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದ ಚೆಟ್ರಿ ಬಳಗ ಎದುರಾಳಿ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾಗಿತ್ತು. ಕೆಲವು ಕಾಲದಿಂದ ಗೋಲು ಬರ ಅನುಭವಿಸಿದ್ದ ಸುನಿಲ್ ಚೆಟ್ರಿ ಮೊದಲ ಎರಡು ಗೋಲುಗಳನ್ನು ಗಳಿಸಿ ಮಿಂಚಿದ್ದರು. ಅನಿರುದ್ಧ ತಾಪ ಮಿಂಚಿನ ಆಟವಾಡಿ ಚೆಂಡನ್ನು ಗುರಿ ಮುಟ್ಟಿಸಿದ್ದರು. ಬದಲಿ ಆಟಗಾರನಾಗಿ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದಿದ್ದ ಜೆಜೆ ಲಾಲ್‌ಫೆಕ್ಲುವಾ ಅಂಗಣಕ್ಕೆ ಬಂದ ಒಂದೇ ನಿಮಿಷದಲ್ಲಿ ಗೋಲು ಗಳಿಸಿ ಸಂಭ್ರಮಿಸಿದ್ದರು.

ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಇಂಥದೇ ತಪ್ಪುಗಳು ಮರುಕಳಿಸಿದರೆ ಚೆಟ್ರಿ ಪಡೆಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಉದ್ಘಾಟನಾ ಪಂದ್ಯದಲ್ಲಿ ಯುಎಇ ಜೊತೆ ಡ್ರಾ ಸಾಧಿಸಿದ್ದ ಬಹರೇನ್‌ ನಂತರ ಥಾಯ್ಲೆಂಡ್‌ ವಿರುದ್ಧ 0–1ರಿಂದ ಸೋತಿತ್ತು. ಆದ್ದರಿಂದ ಆ ತಂಡಕ್ಕೂ ಸೋಮವಾರದ ಪಂದ್ಯ ಮಹತ್ವದ್ದು. ಹೀಗಾಗಿ ಜಿದ್ದಾಜಿದ್ದಿಯ ಹಣಾಹಣಿಗೆ ಪಂದ್ಯ ಸಾಕ್ಷಿಯಾಗಲಿದೆ ಎಂಬ ನಿರೀಕ್ಷೆ ಫುಟ್‌ಬಾಲ್ ಪ್ರಿಯರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT