ನವದೆಹಲಿ: ದೇಶದಲ್ಲಿ ಫುಟ್ಬಾಲ್ ರೆಫ್ರಿಗಳ ಸ್ಥಿತಿಗತಿಯ ಪರಾಮರ್ಶೆ ನಡೆಸಲು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಡಿ.31ರಂದು ಸಭೆಯನ್ನು ಕರೆದಿದ್ದಾರೆ.
ಕಲ್ಯಾಣ್ ಚೌಬೆ ಅವರು ರೆಫ್ರಿಗಳ ಸಮಿತಿಯ ಸದಸ್ಯರು, ಎಐಎಫ್ಎಫ್ ಮುಖ್ಯ ರೆಫ್ರಿಯಿಂಗ್ ಅಧಿಕಾರಿ ಟ್ರೆವರ್ ಕೆಟಲ್ ಮತ್ತು ರೆಫ್ರಿಗಳ ಮೌಲ್ಯಮಾಪಕರ ತಂಡವನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಲು ಮತ್ತು ಮುಂದಿನ ಮಾರ್ಗಗಳ ಕುರಿತು ಚರ್ಚಿಸಲು ಸಿದ್ಧರಾಗಿದ್ದಾರೆ ಎಂದು ಎಐಎಫ್ಎಫ್ ಹೇಳಿದೆ.
ಇತ್ತೀಚೆಗೆ ರೆಫರಿಗಳು ತೆಗೆದುಕೊಂಡ ಕೆಲ ನಿರ್ಧಾರಗಳು ಫುಟ್ಬಾಲ್ ಕ್ಷೇತ್ರದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇಂಡಿಯನ್ ಸೂಪರ್ ಲೀಗ್ನ ಮುಂಬೈ ಸಿಟಿ ಎಫ್ಸಿ ಮತ್ತು ಮೋಹನ್ ಬಾಗನ್ ತಂಡಗಳ ನಡುವಣ ಪಂದ್ಯದಲ್ಲಿ ಏಳು ಆಟಗಾರರನ್ನು ಹೊರಕಳುಹಿಸಲಾಗಿತ್ತು. ರೆಫ್ರಿಗಳ ಈ ನಿರ್ಧಾರ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಇದೇ ಪಂದ್ಯದಲ್ಲಿ ಏಳು ಮಂದಿಗೆ ಎಚ್ಚರಿಕೆ ನೀಡಲಾಗಿತ್ತು. ಆತಿಥೇಯ ಮುಂಬೈ ಸಿಟಿ ಈ ಪಂದ್ಯವನ್ನು 2–1 ಗೋಲುಗಳಿಂದ ಗೆದ್ದುಕೊಂಡಿತ್ತು.
ಎಫ್ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ರೆಫ್ರೀಗಳ ನಿರ್ಧಾರದ ಬಗ್ಗೆ ಈಸ್ಟ್ ಬೆಂಗಾಲ್ ತಂಡವು ದೂರು ದಾಖಲಿಸಿತ್ತು.