ಕೋಲ್ಕತ್ತ: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಹಾಲಿ ಚಾಂಪಿಯನ್ ಎಟಿಕೆ ಮೋಹನ್ ಬಾಗನ್ ತಂಡವು ಡಿಫೆಂಡರ್ ಸಂದೇಶ್ ಜಿಂಗಾನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಭಾರತ ರಾಷ್ಟ್ರೀಯ ತಂಡಕ್ಕೆ ಆಡುವ ಸಂದೇಶ್ ಜಿಂಗಾನ್ ಅವರು ಅರ್ಜುನ ಪ್ರಶಸ್ತಿ ವಿಜೇತರೂ ಹೌದು. ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಜಿಂಗಾನ್ ಅವರೊಡನೆ ಎಷ್ಟು ಮೊತ್ತಕ್ಕೆ ಒಪ್ಪಂದ ನಡೆದಿದೆ ಎಂಬುದನ್ನು ಕ್ಲಬ್ ಬಹಿರಂಗಪಡಿಸಿಲ್ಲ.
‘ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ಕ್ಲಬ್ ಸೇರಿದ್ದು ಖುಷಿ ತಂದಿದೆ. ತಂಡದ ಕೋಚ್ ಹಾಗೂ ಮಾಲೀಕರೊಂದಿಗೆ ಚರ್ಚೆ ನಡೆಸಿದ್ದೇನೆ. ನನ್ನನ್ನು ಈ ಕುಟುಂಬದ ಭಾಗವಾಗಲು ಪರಿಗಣಿಸಿದ್ದಕ್ಕೆ ಹೆಮ್ಮೆಯಿದೆ‘ ಎಂದು ಜಿಂಗಾನ್ ಹೇಳಿದ್ದಾಗಿ ಕ್ಲಬ್ ಉಲ್ಲೇಖಿಸಿದೆ.
ಜಿಂಗಾನ್ ಯೂರೋಪ್ನಲ್ಲಿ ಅದರಲ್ಲೂ ಪ್ರಮುಖವಾಗಿ ಪೋರ್ಚುಗಲ್ನ ಕ್ಲಬ್ವೊಂದಕ್ಕೆ ಆಡಲು ಬಯಸಿದ್ದರು. ಆದರೆ ಕೋವಿಡ್–19 ಪಿಡುಗು ಅವರ ಯೋಚನೆಯನ್ನು ಬದಲಿಸಿತ್ತು.
2021ರ ಎಎಫ್ಸಿ ಕಪ್ ಟೂರ್ನಿಯಲ್ಲಿ ಅವರು ಎಟಿಕೆಎಂಬಿ ಪರ ಕಣಕ್ಕಿಳಿಯಲಿದ್ದಾರೆ. ಕ್ಲಬ್ನಲ್ಲಿ ಅವರಿಗೆ ಭಾರತ ತಂಡದ ಅವರ ಸಹ ಆಟಗಾರ ಪ್ರೀತಂ ಕೋಟಲ್ ಹಾಗೂ ಸ್ಪೇನ್ನ ತಿರಿ ಅವರು ಸಾಥ್ ನೀಡಲಿದ್ದಾರೆ. ಯುವ ಆಟಗಾರ ಸುಮಿತ್ ರಾಠಿ ಕೂಡ ಕ್ಲಬ್ನಲ್ಲಿದ್ದಾರೆ.
ಗಾಯದ ಹಿನ್ನೆಲೆಯಲ್ಲಿ ಜಿಂಗಾನ್ ಅವರು 2019–20ರ ಸಾಲಿನ ಐಎಸ್ಎಲ್ ಟೂರ್ನಿಯಲ್ಲಿ ಆಡಿರಲಿಲ್ಲ.
2014ರಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಉದಯೋನ್ಮುಖ ಆಟಗಾರ ಪ್ರಶಸ್ತಿ ಜಿಂಗಾನ್ ಅವರಿಗೆ ಸಂದಿತ್ತು. 2015ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು.