ಚಿತ್ರದುರ್ಗ: ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಆಗಿದ್ದ ಹನುಮಂತಪ್ಪ ಕೊಪ್ಪದ ಅವರಿಗೆ ಇಲ್ಲಿನ ಕಬೀರಾನಂದಾಶ್ರಮದಿಂದ ನೀಡಲಾಗುವ ಆರೂಢಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದು ಎಂದು ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.
ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ ಫೆಬ್ರುವರಿ 13ರಂದು ಸಂಜೆ ನಡೆಯುವ ಸಮಾರಂಭದಲ್ಲಿ ಕೊಪ್ಪದ ಅವರ ಪತ್ನಿ ಮಹಾದೇವಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ₹ 25 ಸಾವಿರ ನಗದು, ಫಲಕ ಮತ್ತು ಸನ್ಮಾನಪತ್ರವನ್ನು ಒಳಗೊಂಡಿದೆ ಎಂದು ಸ್ವಾಮೀಜಿ ಬುಧವಾರ ಪತ್ರಿಕಾ
ಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು ಎರಡು ವರ್ಷ ಹಿಂದೆ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಉಂಟಾದ ಹಿಮಪಾತದಲ್ಲಿ ಹನುಮಂತಪ್ಪ ಕೊಪ್ಪದ ಅವರು ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಪವಾಡಸದೃಶ ರೀತಿಯಲ್ಲಿ ಬದುಕಿದ್ದರು.