ರೋಷನ್ ತ್ಯಾಗರಾಜನ್
ಬೆಂಗಳೂರು: ಪುದುಚೇರಿಯಲ್ಲಿ ಗುರುವಾರ ಆರಂಭಗೊಂಡ 48ನೇ ಸಬ್ ಜೂನಿಯರ್ ನ್ಯಾಷನಲ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಲು ಕರ್ನಾಟಕದ 13 ವರ್ಷದೊಳಗಿನವರ ಬಾಲಕ– ಬಾಲಕಿಯರ ತಂಡಗಳು ಕಠಿಣ ಅಭ್ಯಾಸದೊಂದಿಗೆ ಸಿದ್ಧತೆ ನಡೆಸಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕೈತಪ್ಪಿದ್ದು, ಆಟಗಾರರು ನಿರಾಸೆಗೊಂಡಿದ್ದಾರೆ.
ರಾಷ್ಟ್ರಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕದ ತಂಡಗಳು ಭಾಗವಹಿಸದಿರುವುದು ಇದೇ ಮೊದಲು. ರಾಜ್ಯದ ಬಾಲಕ ಮತ್ತು ಬಾಲಕಿಯರ ತಂಡಗಳು ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬುಧವಾರ ರಾತ್ರಿ ತಂಡದ ಆಟಗಾರರಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಲಾಗಿದೆ.
ಆಶ್ಚರ್ಯವೆಂದರೆ ಕಳೆದ ವರ್ಷದ ಟೂರ್ನಿಯಲ್ಲಿ ಬಾಲಕಿಯರ ತಂಡವು ಚಾಂಪಿಯನ್ ಆಗಿತ್ತು. ಅವರ ಸಾಧನೆಗಾಗಿ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆ (ಕೆಎಸ್ಬಿಬಿಎ) ಆಟಗಾರರನ್ನು ಸನ್ಮಾನಿಸಿತ್ತು. ಈ ಬಾರಿಯ ಟೂರ್ನಿಯ ಪೂರ್ವಸಿದ್ಧತೆಯ ನಿಟ್ಟಿನಲ್ಲಿ ತಂಡದ ಆಟಗಾರರು ಬೆಂಗಳೂರಿನಲ್ಲಿ 15 ದಿನ ಕಠಿಣ ಅಭ್ಯಾಸ ನಡೆಸಿದ್ದರು.
‘ಮಂಗಳವಾರ ಅಭ್ಯಾಸ ಶಿಬಿರ ಮುಕ್ತಾಯವಾಯಿತು. ಬುಧವಾರ ಸಂಜೆ ಜೆರ್ಸಿಯನ್ನು ಸಂಗ್ರಹಿಸಲು ನಮಗೆ ತಿಳಿಸಿದ್ದರು. ಅದರಂತೆ, ಜೆರ್ಸಿ ಪಡೆಯಲು ಹೋದ ಸಂದರ್ಭದಲ್ಲಿ ‘ನಾವು ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಪ್ರಯಾಣಿಸುತ್ತಿಲ್ಲ’ ಎಂದು ಉಪಾಧ್ಯಕ್ಷರೊಬ್ಬರು ತಿಳಿಸಿದರು’ ಎಂದು ಆಟಗಾರರೊಬ್ಬರ ಪೋಷಕರು ತಿಳಿಸಿದರು.
13 ವರ್ಷದೊಳಗಿನವರ ರಾಜ್ಯ ಚಾಂಪಿಯನ್ಷಿಪ್ನ ಆಧಾರದ ಮೇಲೆ ಕಳೆದ ತಿಂಗಳು ಕಂಠೀರವ ಕ್ರೀಡಾಂಗಣದಲ್ಲಿ ಕೆಎಸ್ಬಿಬಿಎ ಆಶ್ರಯದಲ್ಲಿ ತಂಡಗಳನ್ನು ಆಯ್ಕೆ ಮಾಡಲಾಗಿತ್ತು.
‘ನಮಗೆ ಬುಧವಾರ ರಾತ್ರಿ ಮಾಹಿತಿ ನೀಡಲಾಗಿದೆ. ಟೂರ್ನಿಗೆ ನಮ್ಮ ತಂಡವನ್ನು ಕೈಬಿಟ್ಟ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ. ನಾವು ಉತ್ತಮ ತರಬೇತಿ ನೀಡಿದ್ದೆವು. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಕೋಚ್ ಒಬ್ಬರು ಬೇಸರ ವ್ಯಕ್ತಪಡಿಸಿದರು.
‘ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯಿಂದ ಕೊನೆ ಕ್ಷಣದ ಬದಲಾವಣೆಯನ್ನು ನಾನು ನಿರೀಕ್ಷೆ ಮಾಡಿದ್ದೆವು. ಆದರೆ, ಯಾವುದೇ ಬದಲಾವಣೆ ಆಗಲಿಲ್ಲ’ ಎಂದು ಭಾರತ ಬ್ಯಾಸ್ಕೆಟ್ಬಾಲ್ ಫೆಡರೇಷನ್ನ ಅಧಿಕಾರಿಯೊಬ್ಬರು ತಿಳಿಸಿದರು.
ಕೆಎಸ್ಬಿಬಿಎ ಸದಸ್ಯರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.