ನವದೆಹಲಿ: ಕ್ರೊಯೇಷಿಯಾದಲ್ಲಿ ಜ. 10ರಿಂದ 14ರವರೆಗೆ ನಡೆಯಲಿರುವ ಝಾಗ್ರೆಬ್ ಓಪನ್ ಕುಸ್ತಿ ಟೂರ್ನಿಗೆ ಬಜರಂಗ್ ಪೂನಿಯಾ, ಅಂತಿಮ್ ಪಂಘಾಲ್ ಹಾಗೂ ಇತರ ಮೂವರು ಕುಸ್ತಿಪಟುಗಳನ್ನು ಆಯ್ಕೆ ಸಮಿತಿ ಕೈಬಿಟ್ಟಿದೆ. ಇವರ ಬದಲು 13 ಜನರ ತಂಡವನ್ನು ಆಯ್ಕೆ ಮಾಡಿದ್ದು, ಪಂದ್ಯಾವಳಿಯ ಐದು ವಿಭಾಗಗಳಲ್ಲಿ ಇವರು ಸ್ಪರ್ಧಿಸಲಿದ್ದಾರೆ.
ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸ್ವೀಕರಿಸಲಿರುವ ವಿಶ್ವಕಪ್ನ ಕಂಚಿನ ಪದಕ ವಿಜೇತೆ ಪಂಘಾಲ್ ಅವರು ಟೂರ್ನಿಗೆ ಗೈರಾಗಲಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತ ಬಜರಂಗ್ ಅವರು, ಏಷ್ಯನ್ ಗೇಮ್ಸ್ನಲ್ಲಿ ಯಾವುದೇ ಪದಕ ಪಡೆದಿರಲಿಲ್ಲ. ಅವರು ಟೂರ್ನಿಯಿಂದ ಹೊರುಗುಳಿಯುವ ನಿರ್ಧಾರ ಮಾಡಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಬಜರಂಗ್ ಮುಂಚೂಣಿಯಲ್ಲಿದ್ದರು. ಮೆನ್ ಫ್ರೀಸ್ಟೈಲ್ನಲ್ಲಿ ಭಾರತದ ಶಕ್ತಿಯಾಗಿದ್ದ ಬ್ರಿಜ್ಭೂಷಣ್ ಬದಲು ಅಮನ್ ಶೇರಾವತ್ (57 ಕೆ.ಜಿ.), ಯಶ್ (74 ಕೆ.ಜಿ.), ದೀಪಕ್ ಪೂನಿಯಾ (86 ಕೆ.ಜಿ.), ವಿಕ್ಕಿ (97 ಕೆ.ಜಿ.) ಹಾಗೂ ಸುಮೀತ್ ಮಲ್ಲಿಕ್ (125 ಕೆ.ಜಿ.) ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಹಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಂಡಿದ್ದರು.
‘ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕುರಿತು ಎಲ್ಲಾ ಕುಸ್ತಿಪಟುಗಳ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇದರಲ್ಲಿ 13 ಜನ ಮಾತ್ರ ಒಪ್ಪಿದರು. ಉಳಿದ ಐವರು ಸಾಧ್ಯವಿಲ್ಲ ಎಂದರು’ ಎಂದು ಕುಸ್ತಿ ಆಯ್ಕೆಗೆ ನೇಮಿಸಲಾದ ಅಡ್ಹಾಕ್ ಸಮಿತಿಯ ಭೂಪಿಂದರ್ ಸಿಂಗ್ ಬಜ್ವಾ ಹೇಳಿದ್ದಾರೆ.
‘ಬಜರಂಗ್ ಅವರನ್ನು ಪಾಲ್ಗೊಳ್ಳುವಂತೆ ಕೇಳಿದೆವು. ಆದರೆ ಅವರು ಮ್ಯಾಟ್ ಮೇಲಿನ ಅಭ್ಯಾಸ ಇನ್ನೂ ಆರಂಭಿಸದ ಕಾರಣ, ಭಾರತ ತಂಡದಿಂದ ಹೊರಗುಳಿಯುವುದಾಗಿ ಹೇಳಿದರು’ ಎಂದಿದ್ದಾರೆ.
ಝಾಗ್ರೆಬ್ ಓಪನ್ ಕುಸ್ತಿ ಟೂರ್ನಿಗೆ ಗೈರಾಗಿರುವ ಕುರಿತು ಪ್ರತಿಕ್ರಿಯಿಸಿರುವ ಬಜರಂಗ್, ‘ಇತ್ತೀಚೆಗೆ ಹೆಬ್ಬೆರಳಿಗೆ ಗಾಯವಾಗಿದೆ. ಜತೆಗೆ ಮ್ಯಾಟ್ ಮೇಲೆ ಕುಸ್ತಿ ತರಬೇತಿಯನ್ನು ಆರಂಭಿಸಿಲ್ಲ. ಸರಿಯಾದ ತಯಾರಿ ಇಲ್ಲದೆ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಈಗ ಫಿಟ್ನೆಸ್ ತಯಾರಿ ಆರಂಭಿಸಿದ್ದೇನೆ’ ಎಂದರು.
ಬಜರಂಗ್ ಅವರೊಂದಿಗೆ ಪಂಘಾಲ್ (53 ಕೆ.ಜಿ.), ಪೂಜಾ ಗೆಹಲೋತ್ (50 ಕೆ.ಜಿ.), ಮಾನ್ಸಿ ಅಹ್ಲವಾತ್ (57 ಕೆ.ಜಿ.), ಕಿರಣ್ (76 ಕೆ.ಜಿ.) ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಪುರುಷ ಫ್ರೀಸ್ಟೈಲ್: ಅಮಾನ್ (57 ಕೆ.ಜಿ.), ಯಾಶ್ (74 ಕೆ.ಜಿ.), ದೀಪಕ್ ಪೂನಿಯಾ (86 ಕೆ.ಜಿ.), ವಿಕ್ಕಿ (97 ಕೆ.ಜಿ.), ಸುಮೀತ್ (125 ಕೆ.ಜಿ.)
ಗ್ರೀಕೊ ರೋಮನ್: ಜ್ಞಾನೇಂದ್ರ (60 ಕೆ.ಜಿ.), ನೀರಜ್ (67 ಕೆ.ಜಿ.), ವಿಕಾಸ್ (77 ಕೆ.ಜಿ.), ಸುನೀಲ್ ಕುಮಾರ್ (87 ಕೆ.ಜಿ.), ನರೀಂದರ್ ಚೀಮಾ (97 ಕೆ.ಜಿ.) ಹಾಗೂ ನವೀನ್ (130 ಕೆ.ಜಿ.).
ಮಹಿಳೆಯರ ವಿಭಾಗ: ಸೋನಮ್ (62 ಕೆ.ಜಿ.) ಹಾಗೂ ರಾಧಿಕಾ (68 ಕೆ.ಜಿ.)
ತರಬೇತುದಾರರ ಹಾಗೂ ಪೂರಕ ಸಿಬ್ಬಂದಿ: ಕುಲದೀಪ್ ಸಿಂಗ್ (ತಂಡದ ನಾಯಕ ಹಾಗೂ ಕೋಚ್), ವಿನೋದ್ ಕುಮಾರ್, ಸುಜೀತ್, ಶಶಿ ಭೂಷಣ್ ಪ್ರಸಾದ್, ಮನೋಜ್ ಕುಮಾರ್, ವಿರೇಂದ್ರ ಸಿಂಗ್ ಹಾಗೂ ಅಲ್ಕಾ ತೋಮರ್ (ತರಬೇತಿ), ವಿಶಾಲ್ ಕುಮಾರ್ ರೈ (ಫಿಝಿಯೊ) ಹಾಗೂ ನೀರಜ್.
ರೆಫ್ರೀ: ಸತ್ಯ ದೇವ್ ಮಲ್ಲಿಕ್, ದಿನೇಶ್ ಧೋಂಡಿಬಾ ಗುಂಡ್ ಹಾಗೂ ಸಂಜಯ್ ಕುಮಾರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.