ನವದೆಹಲಿ: ಕರ್ನಾಟಕದ ಅರ್ಚನಾ ಕಾಮತ್ ಏಷ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಆಡಲಿರುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಒಲಿಂಪಿಯನ್ ಮಣಿಕಾ ಬಾತ್ರಾ ಅವರನ್ನು ಆಯ್ಕೆ ಪರಿಗಣಿಸಿಲ್ಲ.
ದೋಹಾದಲ್ಲಿ ಸೆ. 28ರಿಂದ ಚಾಂಪಿಯನ್ಷಿಪ್ ಆರಂಭಗೊಳ್ಳಲಿದೆ. ಈ ಟೂರ್ನಿಯ ಪೂರ್ವಸಿದ್ಧತೆಗಾಗಿ ಸೋನೆಪತ್ನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕಡ್ಡಾಯ ರಾಷ್ಟ್ರೀಯ ಶಿಬಿರದಲ್ಲಿ ಮಣಿಕಾ ಭಾಗವಹಿಸಿರಲಿಲ್ಲ. ಆದ್ದರಿಂದ ಅವರನ್ನು ಆಯ್ಕೆ ಮಾಡಿಲ್ಲ.
56ನೇ ಶ್ರೇಯಾಂಕದ ಮಣಿಕಾ ಗೈರುಹಾಜರಿಯಲ್ಲಿ 97ನೇ ಶ್ರೇಯಾಂಕದ ಸುತೀರ್ಥ ಮುಖರ್ಜಿ ಮಹಿಳಾ ತಂಡವನ್ನು ಮುನ್ನಡೆಸುವರು.
ಪುರುಷರ ವಿಭಾಗದಲ್ಲಿ ಅನುಭವಿ ಅಚಂತ ಶರತ್ ಕಮಲ್ ತಂಡದ ನಾಯಕತ್ವ ವಹಿಸಲಿದ್ದಾರೆ.
ಶಿಬಿರದಲ್ಲಿ ಪಾಲ್ಗೊಳ್ಳದವರನ್ನು ಆಯ್ಕೆಗೆ ಪರಿಗಣಿಸುವುದಿಲ್ಲವೆಂದು ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್ಐ) ಈ ಮೊದಲೇ ಘೋಷಿಸಿತ್ತು. ಒಲಿಂಪಿಕ್ಸ್ನಲ್ಲಿಯೂ ಮಣಿಕಾ ಅವರು ರಾಷ್ಟ್ರೀಯ ಕೋಚ್ ಮಾರ್ಗದರ್ಶನವನ್ನು ನಿರಾಕರಿಸಿದ್ದರು. ನಂತರದ ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಕೋಚ್ ಅರ್ಹತಾ ಪಂದ್ಯ ಫಿಕ್ಸಿಂಗ್ ಮಾಡಲು ಪ್ರಚೋದಿಸಿದ್ದರು ಎಂದು ಮಣಿಕಾ ದೂರಿದ್ದರು.
ಈ ಟೂರ್ನಿಯಲ್ಲಿ ಬಲಾಢ್ಯ ಚೀನಾ ತಂಡವೂ ಕಣಕ್ಕಿಳಿಯಲಿದೆ. ಪುರುಷರ ಸಿಂಗಲ್ಸ್, ತಂಡ ಮತ್ತು ಡಬಲ್ಸ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.