ನವದೆಹಲಿ: ಒಂದು ದಶಕದಿಂದ ಭಾರತ ಹಾಕಿ ತಂಡದಲ್ಲಿ ಮಿಂಚಿದ್ದ ಸರದಾರ್ ಸಿಂಗ್ ಅವರು ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ನೀರಸ ಆಟ ಆಡಿದ್ದು ಭಾರತಕ್ಕೆ ಚಿನ್ನ ಗೆದ್ದುಕೊಡಲು ಸಾಧ್ಯವಾಗದೇ ಇದ್ದುದಕ್ಕೆ ಬೇಸರಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.
‘ಕುಟುಂಬದ ಸದಸ್ಯರು, ಗೆಳೆಯರು ಮತ್ತು ಹಾಕಿ ಇಂಡಿಯಾದ ಹಿರಿಯರ ಜೊತೆ ಚರ್ಚಿಸಿದ ನಂತರ ಈ ನಿರ್ಧಾರ ಕೈಗೊಂಡಿದ್ದೇನೆ. ವೃತ್ತಿಜೀವನದಲ್ಲಿ 12 ವರ್ಷ ಎಂದರೆ ಸಣ್ಣ ಅವಧಿಯಲ್ಲ. ಈಗ ನಿವೃತ್ತಿಗೆ ಸಕಾಲ ಎಂದು ಅನಿಸಿದೆ’ ಎಂದು ಅವರು ಸುದ್ದಿಸಂಸ್ಥೆಗೆ ವಿವರಿಸಿದರು.
ಏಷ್ಯನ್ ಕ್ರೀಡಾಕೂಟದ ನಂತರ ಅವರು ‘ನನ್ನಲ್ಲಿ ಇನ್ನೂ ಆಟ ಆಡುವ ಸಾಮರ್ಥ್ಯ ಇದ್ದು 2020ರ ಒಲಿಂಪಿಕ್ಸ್ ಆಡಲು ಬಯಸಿದ್ದೇನೆ’ ಎಂದು ಹೇಳಿದ್ದರು. ಹಾಕಿ ಇಂಡಿಯಾವು ಬುಧವಾರ 25 ಆಟಗಾರರನ್ನು ರಾಷ್ಟ್ರೀಯ ಶಿಬಿರಕ್ಕಾಗಿ ಆಯ್ಕೆ ಮಾಡಿತ್ತು. ಅದರಲ್ಲಿ ಸರ್ದಾರ್ ಸಿಂಗ್ ಹೆಸರು ಇರಲಿಲ್ಲ. ಇದರಿಂದ ಬೇಸರಗೊಂಡು ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆಟಗಾರರ ಹೆಸರನ್ನು ಪ್ರಕಟಿಸುವ ಮೊದಲೇ ನಿವೃತ್ತಿ ಘೋಷಿಸಿರುವುದಾಗಿ ಸರ್ದಾರ್ ಸ್ಪಷ್ಟಪಡಿಸಿದ್ದಾರೆ.