ಹುಬ್ಬಳ್ಳಿ:ಕರ್ನಾಟಕದ ಎನ್. ರಾಕೇಶ್ ಅವರು ಧಾರವಾಡ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ1,600 ಫಿಡೆ ರೇಟಿಂಗ್ ಒಳಗಿನವರ ಅಖಿಲ ಭಾರತ ಮಟ್ಟದ ಮುಕ್ತ ಚೆಸ್ ಟೂರ್ನಿಯಲ್ಲಿ ಆರನೇ ಸುತ್ತಿನ ಅಂತ್ಯಕ್ಕೆ ಮುನ್ನಡೆ ಪಡೆದುಕೊಂಡಿದ್ದಾರೆ.
ಚುರುಕಿನ ನಡೆಗಳ ಮೂಲಕ ಗಮನ ಸೆಳೆದರಾಕೇಶ್ ಆರನೇ ಸುತ್ತಿನ ಪಂದ್ಯದಲ್ಲಿ ಆಂಧ್ರದ ವಿ. ಪ್ರಶಾಂತ್ ಅವರನ್ನು ಮಣಿಸಿ ಒಟ್ಟು ಅಂಕಗಳ ಸಂಖ್ಯೆಯನ್ನುಆರಕ್ಕೆ ಹೆಚ್ಚಿಸಿಕೊಂಡರು.
ಗೋವಾದ ಆರ್ಯನ್ ಶಾಮರಾವ್ ರಾಯ್ಕರ್, ಆಂಧ್ರದ ವಿಶ್ವನಾಥ್ ಕಣ್ಣಮ್, ತಮಿಳುನಾಡಿನ ಜಿ. ಕಾರ್ತಿಕೇಯನ್, ಮಹಾರಾಷ್ಟ್ರದ ಅಭಿಷೇಕ್ ಪಾಟೀಲ ತಲಾ ಆರು ಅಂಕಗಳನ್ನುಕಲೆಹಾಕಿ ಮುನ್ನಡೆ ಹಂಚಿಕೊಂಡಿದ್ದಾರೆ.
ಆದ್ದರಿಂದ ಟೂರ್ನಿಯ ಕೊನೆಯ ದಿನವಾದ ಸೋಮವಾರ ಅಂತಿಮ ಮೂರು ಸುತ್ತಿನ ಪಂದ್ಯಗಳು ಕುತೂಹಲ ಮೂಡಿಸಿವೆ.
ಕರ್ನಾಟಕದ ಇನ್ನೊಬ್ಬ ಆಟಗಾರ ಪ್ರತೀಕ್ ಎಸ್. ಎಂ ಆರನೇ ಸುತ್ತಿನ ಪಂದ್ಯದಲ್ಲಿ ತಮಿಳುನಾಡಿನ ಆದಿತ್ಯ ರಮೇಶ ಎದುರು ಜಯ ಪಡೆದರು. ಪ್ರತೀಕ್ ಖಾತೆಯಲ್ಲಿ 5.5 ಅಂಕಗಳಿವೆ. ಇದೇ ಸುತ್ತಿನಲ್ಲಿ ರಾಜ್ಯದ ಅಭಿಷೇಕ್ ಗಾಣಿಗೇರ ಕರ್ನಾಟಕದವರೇ ಆದ ವಿಕ್ರಮ್ ಹೆಗ್ಡೆ ಅವರನ್ನು ಮಣಿಸಿದರು. ಅಭಿಷೇಕ್ ಆರನೇ ಸುತ್ತಿನ ಅಂತ್ಯಕ್ಕೆ 5.5 ಅಂಕಹೊಂದಿದ್ದಾರೆ.
ಆರನೇ ಸುತ್ತಿನಲ್ಲಿಕರ್ನಾಟಕದ ಅರವಿಂದಕ್ಷಣ್ ರಾಜ್ಯದವರೇ ಆದ ಎಸ್. ಕಾರ್ತಿಕ್ ಮೇಲೆ ಗೆಲುವು ಪಡೆದರೆ, ಪಿ.ಎಸ್. ಸಾತ್ವಿಕ್ ಶಿವಾನಂದ್ ತಮಿಳುನಾಡಿನ ಆರ್. ಗೋಕುಲವಿಷ್ಣು ಎದುರು ಡ್ರಾ ಮಾಡಿಕೊಂಡರು. ರಾಜ್ಯದ ಇನ್ನೊಬ್ಬ ಆಟಗಾರ ಶ್ರೀಕಾಂತ ಕುಲಕರ್ಣಿ ಮಹಾರಾಷ್ಟ್ರದ ಅಭಿಷೇಕ ಪಾಟೀಲ ಎದುರು ಪರಾಭವಗೊಂಡರು.