ಸೂರತ್: ಗುಜರಾತ್ನ ಹರ್ಮೀತ್ ದೇಸಾಯಿ ಮತ್ತು ಪಶ್ಚಿಮ ಬಂಗಾಳದ ಸುತೀರ್ಥಾ ಮುಖರ್ಜಿ ಅವರು ರಾಷ್ಟ್ರೀಯ ಕ್ರೀಡಾಕೂಟದ ಟೇಬಲ್ ಟೆನಿಸ್ ಸ್ಪರ್ಧೆಗಳ ಕ್ರಮವಾಗಿ ಪುರುಷರ ಸಿಂಗಲ್ಸ್ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.
ಇಲ್ಲಿ ನಡೆಯುತ್ತಿರುವ ಕೂಟದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಹರ್ಮೀತ್ 4–2ರಿಂದ ಜಿ.ಸತ್ಯನ್ ಅವರಿಗೆ ಆಘಾತ ನೀಡಿದರು. ಮಹಿಳಾ ಸಿಂಗಲ್ಸ್ನಲ್ಲಿ ಸುತೀರ್ಥಾ ಕೂಡ ಇದೇ ಅಂತರದಿಂದ ದೆಹಲಿಯ ಮಣಿಕಾ ಬಾತ್ರಾ ಅವರನ್ನು ಪರಾಭವಗೊಳಿಸಿದರು.
ಫೈನಲ್ನಲ್ಲಿ ಹರ್ಮೀತ್ ಅವರು ಹರಿಯಾಣದ ಸೌಮ್ಯಜೀತ್ ಘೋಷ್ ಎದುರು ಆಡುವರು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಸೌಮ್ಯಜೀತ್ 4–1ರಿಂದ ಮಾನುಷ್ ಅವರನ್ನು ಪರಾಭವಗೊಳಿಸಿದರು.
ಸುತೀರ್ಥಾ ಅವರು ಚಿನ್ನದ ಪದಕಕ್ಕಾಗಿ ತೆಲಂಗಾಣದ ಶ್ರೀಜಾ ಅಕುಲಾ ಎದುರು ಹೋರಾಡಲಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ಅಕುಲಾ 4–1ರಿಂದ ಮಹಾರಾಷ್ಟ್ರದ ದಿಯಾ ಚಿತಳೆ ಎದುರು ಗೆದ್ದರು.
ಗುಜರಾತ್ನ ಮಾನುಷ್ ಶಾ ಮತ್ತು ಕೃತ್ವಿಕಾ ಸಿನ್ಹಾ ರಾಯ್ ಅವರು ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ ಈ ಜೋಡಿಯು ತೆಲಂಗಾಣದ ಶ್ರೀಜಾ– ಎಫ್.ಆರ್.ಸ್ನೇಹಿತ್ ವಿರುದ್ಧ ಜಯ ಸಾಧಿಸಿದರು.