ಕೆಟೊಲಿಕಾ, ಇಟಲಿ: ಭಾರತದ ಗ್ರ್ಯಾಂಡ್ಮಾಸ್ಟರ್ ಎಸ್.ಎಲ್. ನಾರಾಯಣನ್ ಅವರು ಗ್ರ್ಯಾಂಡಿಸ್ಕಾಚಿ ಕೆಟೊಲಿಕಾ ಅಂತರರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಮಂಗಳವಾರ ಕೊನೆಗೊಂಡ ಟೂರ್ನಿಯಲ್ಲಿ ಭಾರತದವರೇ ಆದ ಆರ್. ಪ್ರಜ್ಞಾನಂದ ಅವರು ರನ್ನರ್ಅಪ್ ಸ್ಥಾನ ಗಳಿಸಿದರು. ನಾರಾಯಣನ್ ಸೇರಿ ಆರು ಮಂದಿ ತಲಾ 6.5 ಪಾಯಿಂಟ್ಸ್ ಗಳಿಸಿದ್ದರು. ಆದರೆ ಟೈಬ್ರೇಕ್ನಲ್ಲಿ ಗಳಿಸಿದ ಉತ್ತಮ ಸ್ಕೋರ್ನಿಂದಾಗಿ ನಾರಾಯಣನ್ಗೆ ಟ್ರೋಫಿ ಒಲಿಯಿತು.
ಅಗ್ರ ಶ್ರೇಯಾಂಕದ, 24 ವರ್ಷದ ನಾರಾಯಣನ್ ಒಂಬತ್ತು ಸುತ್ತುಗಳಲ್ಲಿ ಅಜೇಯರಾಗಿ ಉಳಿದರು. ಮಂಗಳವಾರ ನಡೆದ ಒಂಬತ್ತನೇ ಹಾಗೂ ಅಂತಿಮ ಸುತ್ತಿನಲ್ಲಿ ಅವರು ಇಟಲಿಯ ಪಿಯರ್ ಲುಯಿಗಿ ಬ್ಯಾಸೊ ಜೊತೆ ಡ್ರಾ ಮಾಡಿಕೊಂಡರು. ಒಟ್ಟು ನಾಲ್ಕು ಗೆಲುವು ಮತ್ತು ಐದು ಸುತ್ತುಗಳಲ್ಲಿ ಡ್ರಾ ಸಾಧಿಸಿದರು.
ಪ್ರಜ್ಞಾನಂದ ಕೂಡ ನಾಲ್ಕು ಪಂದ್ಯಗಳಲ್ಲಿ ಜಯ ಮತ್ತು ಐದರಲ್ಲಿ ಡ್ರಾ ಸಾಧಿಸಿದರು. ಭಾರತದ ಇನ್ನೋರ್ವ ಆಟಗಾರ ಪ್ರಣವ್ ಆನಂದ್ ಒಂಬತ್ತನೇ ಸ್ಥಾನ ಗಳಿಸಿದರು.