ಬೆಂಗಳೂರು: ಅಪೂರ್ವ ಆಟ ಆಡಿದ ಕೆನರಾ ಬ್ಯಾಂಕ್ ತಂಡದವರು ಹಾಕಿ ಕರ್ನಾಟಕ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ.
ಶಾಂತಿನಗರದಲ್ಲಿರುವ ಕೆ.ಎಂ.ಕಾರ್ಯಪ್ಪ ಹಾಕಿ ಅರೆನಾದಲ್ಲಿ ಸೋಮವಾರ ನಡೆದ ಹೋರಾಟದಲ್ಲಿ ಕೆನರಾ ಬ್ಯಾಂಕ್ 5–1 ಗೋಲುಗಳಿಂದ ಪೋಸ್ಟಲ್ ತಂಡವನ್ನು ಪರಾಭವಗೊಳಿಸಿತು.
ವಿಜಯೀ ತಂಡದ ಪೃಥ್ವಿ ರಾಜ್ (18ನೇ ನಿಮಿಷ), ಕೆ.ಪಿ.ಸೋಮಯ್ಯ (24), ನಿಕಿನ್ ತಿಮ್ಮಯ್ಯ (27), ಕೆ.ಪಿ.ದಿನೇಶ್ (54) ಮತ್ತು ಕೆ.ಎಂ.ಸೋಮಣ್ಣ (56) ಅವರು ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.
ಪೋಸ್ಟಲ್ ತಂಡದ ನವೀನ್ ಕುಮಾರ್ 39ನೇ ನಿಮಿಷದಲ್ಲಿ ಗೋಲು ಹೊಡೆದರು.
ಕಸ್ಟಮ್ಸ್ ಆ್ಯಂಡ್ ಎಕ್ಸೈಸ್ ಮತ್ತು ಎಎಸ್ಸಿ ನಡುವಣ ದಿನದ ಇನ್ನೊಂದು ಪಂದ್ಯ 2–2 ಗೋಲುಗಳಿಂದ ಡ್ರಾ ಆಯಿತು.
ಸರೀನ್ ಆರನೇ ನಿಮಿಷದಲ್ಲಿ ಗೋಲು ಗಳಿಸಿ ಎಎಸ್ಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 14ನೇ ನಿಮಿಷದಲ್ಲಿ ಕೆ.ಎ.ನೀಲೇಶ್ ಚೆಂಡನ್ನು ಗುರಿ ಸೇರಿಸಿದ್ದರಿಂದ ಕಸ್ಟಮ್ಸ್ 1–1 ಸಮಬಲ ಸಾಧಿಸಿತು. 42ನೇ ನಿಮಿಷದಲ್ಲಿ ಚಂದನ್ ಗೋಲು ಬಾರಿಸಿ ಎಎಸ್ಸಿಗೆ 2–1 ಮುನ್ನಡೆ ತಂದುಕೊಟ್ಟರು. 53ನೇ ನಿಮಿಷದಲ್ಲಿ ಪಿ.ಎಲ್.ತಿಮ್ಮಣ್ಣ ಗೋಲು ಬಾರಿಸಿ ಸಮಬಲಕ್ಕೆ ಕಾರಣರಾದರು.