ಟೋಕಿಯೊ: ಅನಿರ್ಬನ್ ಲಾಹಿರಿ ಹಾಗೂ ಉದಯನ್ ಮಾನೆ ಅವರು ಒಲಿಂಪಿಕ್ಸ್ನಲ್ಲಿ ಭಾರತದ ಗಾಲ್ಫ್ ಅಭಿಯಾನವನ್ನು ಗುರುವಾರ ಆರಂಭಿಸಲಿದ್ದಾರೆ. ಇಲ್ಲಿ ಕಸುಮಿಗಾಸೆಕಿ ಕ್ಲಬ್ ಅಂಗಣದಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸ ಈ ಆಟಗಾರರಲ್ಲಿದೆ.
60 ಆಟಗಾರರಿರುವ ಕೂಟದಲ್ಲಿ ಅಚ್ಚರಿಯ ಫಲಿತಾಂಶ ಹೊರಹೊಮ್ಮಿಸುವ ನಿರೀಕ್ಷೆ ಇಟ್ಟುಕೊಂಡಿರುವ ಅನಿರ್ಬನ್, ಬೆಂಗಳೂರಿನ ಆಟಗಾರ ಎಸ್.ಚಿಕ್ಕರಂಗಪ್ಪ ಅವರನ್ನು ತಮ್ಮ ಕ್ಯಾಡಿಯಾಗಿ ಟೋಕಿಯೊಗೆ ಕರೆದೊಯ್ದಿದ್ದಾರೆ. ಚಿಕ್ಕರಂಗಪ್ಪ ಕೂಡ ಹಲವುದೇಶಿ ಟೂರ್ನಿಗಳಲ್ಲಿ ಅಗ್ರ ಮೂರರೊಳಗಿನ ಸ್ಥಾನ ಗಳಿಸಿದವರು.
ಬೆಂಗಳೂರಿನ ಇನ್ನೋರ್ವ ಆಟಗಾರ ಉದಯನ್ ಮಾನೆ ಕೂಡ ಈ ಬಾರಿ ಒಲಿಂಪಿಕ್ಸ ಟಿಕೆಟ್ ಗಿಟ್ಟಿಸಿದ್ದು, ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ. ಅನಿರ್ಬನ್ ಹಾಗೂ ಉದಯನ್ ಇಬ್ಬರಿಗೂ ವಿಜಯ್ ದಿವೇಚಾ ತರಬೇತಿ ನೀಡಿದ್ದಾರೆ.
ಮುಂದಿನ ವಾರದಿಂದ ಮಹಿಳಾ ವಿಭಾಗದ ಪಂದ್ಯಗಳು ನಡೆಯಲಿದ್ದು, ಭಾರತದ ಅದಿತಿ ಅಶೋಕ್ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
2016ರ ರಿಯೊ ಒಲಿಂಪಿಕ್ಸ್ನಲ್ಲಿ ಅನಿರ್ಬನ್ 57ನೇ ಸ್ಥಾನ ಗಳಿಸಿದ್ದರು. ಈ ಬಾರಿ ಸಾಧನೆಯನ್ನು ಉತ್ತಮಪಡಿಸಿಕೊಳ್ಳುವ ಹಂಬಲದಲ್ಲಿದ್ದಾರೆ.