ಚೆನ್ನೈ: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದೆ.
ಮಂಗಳವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಶಶಾಂಕ್ ರೈ ಗಳಿಸಿದ 14 ಪಾಯಿಂಟ್ಸ್ ನೆರವಿನಿಂದ 69–44ರಿಂದ ರಾಜಸ್ಥಾನ ತಂಡವನ್ನು ಪರಾಭವಗೊಳಿಸಿತು. ರಾಜ್ಯ ತಂಡದ ಪರ ಪ್ರತ್ಯಾಂಶು ತೋಮರ್ 12, ಹರೀಶ್ ಮುತ್ತು ಮತ್ತು ಅಭಿಷೇಕ್ ಗೌಡ ತಲಾ 11 ಪಾಯಿಂಟ್ಸ್ ಗಳಿಸಿದರು.
ಈ ಜಯದೊಂದಿಗೆ ಕರ್ನಾಟಕ ತಂಡವು ಟೂರ್ನಿಯ ಎರಡನೇ ಸುತ್ತು ಪ್ರವೇಶಿಸಿತು. ಪುರುಷರ ವಿಭಾಗದಲ್ಲಿ ಪಂಜಾಬ್, ಸರ್ವಿಸಸ್, ತಮಿಳುನಾಡು, ಉತ್ತರಾಖಂಡ, ಹರಿಯಾಣ, ರೈಲ್ವೇಸ್ ತಂಡಗಳೂ ಎರಡನೇ ಸುತ್ತಿಗೆ ಕಾಲಿಟ್ಟವು.
ದಿನದ ಇನ್ನುಳಿದ ಪಂದ್ಯಗಳಲ್ಲಿ ಹರಿಯಾಣ 74–57ರಿಂದ ಪಶ್ಚಿಮ ಬಂಗಾಳ ಎದುರು, ಸರ್ವಿಸಸ್ 77–55ರಿಂದ ಉತ್ತರ ಪ್ರದೇಶ ಎದುರು, ಪಂಜಾಬ್ 96–58ರಿಂದ ತೆಲಂಗಾಣ ವಿರುದ್ಧ ಜಯ ಸಾಧಿಸಿದವು.
ಮಹಿಳೆಯರ ವಿಭಾಗದಲ್ಲಿ ರೈಲ್ವೇಸ್ 120–66ರಿಂದ ದೆಹಲಿ ಎದುರು, ತೆಲಂಗಾಣ 54–37ರಿಂದ ಒಡಿಶಾ ಎದುರು ಜಯ ಗೆಲುವು ಸಾಧಿಸಿದವು.