ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ವಿಶ್ವನಾಥನ್‌ ಆನಂದ್‌ಗೆ ಆಘಾತ

Last Updated 10 ಜೂನ್ 2022, 10:05 IST
ಅಕ್ಷರ ಗಾತ್ರ

ಸ್ಟಾವೆಂಜರ್‌, ನಾರ್ವೆ: ವಿಶ್ವನಾಥನ್‌ ಆನಂದ್‌ ಅವರ ನಾರ್ವೆ ಚೆಸ್‌ ಟೂರ್ನಿಯ 8ನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದು, ಪ್ರಶಸ್ತಿ ಗೆಲ್ಲುವ ಸಾಧ್ಯತೆ ಕ್ಷೀಣಿಸಿದೆ.

ಭಾರತದ ಗ್ರ್ಯಾಂಡ್‌ಮಾಸ್ಟರ್‌ ಗುರುವಾರ ನಡೆದ ಕ್ಲಾಸಿಕಲ್‌ ಪಂದ್ಯದಲ್ಲಿ ಅಜರ್‌ಬೈಜಾನ್‌ನ ಶಕ್ರಿಯಾರ್‌ ಮಮೆದ್ಯರೊವ್‌ ಕೈಯಲ್ಲಿ 22 ನಡೆಗಳಲ್ಲಿ ಪರಾಭವಗೊಂಡರು. ಇದೀಗ 13 ಪಾಯಿಂಟ್‌ಗಳನ್ನು ಹೊಂದಿರುವ ಅವರು ಮೂರನೇ ಸ್ಥಾನಕ್ಕೆ ಕುಸಿತ ಕಂಡರು.

ಟೂರ್ನಿಯಲ್ಲಿ ಇನ್ನೊಂದು ಸುತ್ತಿನ ಹಣಾಹಣಿ ಬಾಕಿಯುಳಿದಿದ್ದು, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಗೆಲುವಿನ ಓಟ ಮುಂದುವರಿಸಿ 15 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡರು. ಎಂಟನೇ ಸುತ್ತಿನಲ್ಲಿ ಅವರು ಫ್ರಾನ್ಸ್‌ನ ಮ್ಯಾಕ್ಸಿಮ್‌ ವಾಶಿರ್‌ ಲಗ್ರಾವ್ ವಿರುದ್ಧ ಗೆದ್ದರು. ಇವರ ನಡುವಿನ ಕ್ಲಾಸಿಕಲ್‌ ಪಂದ್ಯ 79 ನಡೆಗಳಲ್ಲಿ ಡ್ರಾದಲ್ಲಿ ಕೊನೆಗೊಂಡಿತು. ಫಲಿತಾಂಶ ನಿರ್ಣಯಿಸಲು ನಡೆದ ಆರ್ಮಗೆಡನ್ (ಸಡನ್‌ ಡೆತ್‌) ಗೇಮ್‌ನಲ್ಲಿ ಕಾರ್ಲ್‌ಸನ್‌ 54 ನಡೆಗಳಲ್ಲಿ ಜಯ ಸಾಧಿಸಿದರು.

14.5 ಪಾಯಿಂಟ್‌ಗಳನ್ನು ಕಲೆಹಾಕಿರುವ ಮಮೆದ್ಯರೊವ್ ಎರಡನೇ ಸ್ಥಾನದಲ್ಲಿದ್ದಾರೆ. 12.5 ಪಾಯಿಂಟ್ಸ್‌ ಹೊಂದಿರುವ ಲಾಗ್ರೆವ್‌ 4ನೇ ಸ್ಥಾನದಲ್ಲಿದ್ದಾರೆ. ಇತರ ಪಂದ್ಯಗಳಲ್ಲಿ ಬಲ್ಗೇರಿಯದ ವೆಸೆಲಿನ್‌ ಟೊಪಾಲೊವ್ ಅವರು ಅಮೆರಿಕದ ವೆಸ್ಲಿ ಸೊ ವಿರುದ್ಧ; ತೈಮೂರ್‌ ರಜಬೊವ್‌ ಅವರು ಚೀನಾದ ಹವೊ ವಾಂಗ್‌ ಎದುರು ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT