ನವದೆಹಲಿ: ಭಾರತದ ಪ್ರಮುಖ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಅವರು ಕೋವಿಡ್ ಪಿಡುಗಿನಿಂದ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ಧಾವಿಸಿದ್ದಾರೆ.10 ಲಕ್ಷ ರೂಪಾಯಿ ನಿಧಿ ಸಂಗ್ರಹಿಸಿ ಟೇಬಲ್ ಟೆನಿಸ್ ಕ್ರೀಡಾ ಪರಿಧಿಯೊಳಗೆ ಕಾರ್ಯನಿರ್ವಹಿಸುವ 100 ಮಂದಿಗೆ ನೀಡಲು ಅವರು ನಿರ್ಧರಿಸಿದ್ದಾರೆ.
ಶರತ್ ಮತ್ತು ಸತ್ಯನ್ ಅವರ ಪ್ರಯತ್ನಕ್ಕೆ ಹಿರಿಯ ಆಟಗಾರ್ತಿ ನೇಹಾ ಅಗರವಾಲ್ ಕೂಡ ಜೋಡಿಸಿದ್ದಾರೆ. ಈ ಮೂವರು ಸೇರಿ ಈಗಾಗಲೇ ನಾಲ್ಕು ದಿನಗಳಲ್ಲಿ ₹7 ಲಕ್ಷ ಸಂಗ್ರಹಿಸಿದ್ದಾರೆ. ಈ ನಿಧಿಯನ್ನು ಆಟಗಾರರು, ತರಬೇತುದಾರರು ಹಾಗೂ ಅಂಪೈರ್ಗಳಿಗೆ ಹಂಚಲಿದ್ದಾರೆ.
‘ತಮ್ಮ ಸಹ ಆಟಗಾರರಾಗಿದ್ದ, ಸದ್ಯ ತರಬೇತುದಾರರಾಗಿ ಕೆಲಸ ಮಾಡುತ್ತಿರುವವರು ಎದುರಿಸುತ್ತಿರುವ ದುಸ್ಥಿತಿಯ ಬಗ್ಗೆ ಸತ್ಯನ್ ನನಗೆ ತಿಳಿಸಿದರು. ಸದ್ಯದ ಬಿಕ್ಕಟ್ಟಿನಲ್ಲಿ ಅವರಿಗೆ ಯಾವುದೇ ಉದ್ಯೋಗವಿಲ್ಲ. ಹಾಗಾಗಿ ನಾವು ಕನಿಷ್ಠ ಇಷ್ಟಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದೆವು’ ಎಂದು ಶರತ್ ಹೇಳಿದ್ದಾರೆ.
‘ನಮ್ಮ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಧಿ ಸಂಗ್ರಹ ಹೆಚ್ಚಿಸಿ 100ಕ್ಕಿಂತ ಹೆಚ್ಚು ಮಂದಿಗೆ ನೆರವಾಗುತ್ತೇವೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ತಿಳಿಸುತ್ತೇವೆ’ ಎಂದು ಶರತ್ ನುಡಿದರು.
ಹಣದ ಅಗತ್ಯವಿರುವವರ ಪಟ್ಟಿ ತಯಾರಿಸಲು ಶರತ್ ಹಾಗೂ ಸತ್ಯನ್ ಅವರಿಗೆ ಸೌಮ್ಯದೀಪ್ ರಾಯ್, ಕಮಲೇಶ್ ಮೆಹ್ತಾ ಸೇರಿದಂತೆ ಹಲವರು ನೆರವಾಗುತ್ತಿದ್ದಾರೆ.