ಮೈಸೂರು: ಆರೆಂಜ್ ಸ್ಪೋರ್ಟ್ಸ್ ಸಂಸ್ಥೆಯು ಮೈಸೂರು ಟೆನಿಸ್ ಕ್ಲಬ್ ಸಹಯೋಗದೊಂದಿಗೆ ಫೆಬ್ರುವರಿ 11ರಿಂದ 15ರ ವರೆಗೆ ಮೈಸೂರು ಓಪನ್ ಟೆನಿಸ್ ಟೂರ್ನಿ ಆಯೋಜಿಸಿದೆ.
ಎಐಟಿಎ ಮತ್ತು ಕೆಎಸ್ಎಲ್ಟಿಎಯಿಂದ ಮಾನ್ಯತೆ ಪಡೆದಿರುವ ಈ ಟೂರ್ನಿಯಲ್ಲಿ ಕರ್ನಾಟಕ ಅಲ್ಲದೆ ವಿವಿಧ ರಾಜ್ಯಗಳ ಪ್ರಮುಖ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಆರೆಂಜ್ ಸ್ಪೋರ್ಟ್ಸ್ ಮಾಲೀಕ ರವಿಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳೀಯ ಆಟಗಾರ ಎಸ್.ಡಿ.ಪ್ರಜ್ವಲ್ ದೇವ್, ಬಿ.ಆರ್.ನಿಕ್ಷೇಪ್, ನವದೆಹಲಿಯ ಯುಗಾಲ್ ಬನ್ಸಲ್, ತಮಿಳುನಾಡಿನ ವಿ.ಎಂ.ರಂಜಿತ್, ಪೃಥ್ವಿ ಶೇಖರ್, ಗೋಕುಲ್ ಸುರೇಶ್ ಒಳಗೊಂಡಂತೆ ಎಐಟಿಎ ರ್ಯಾಂಕಿಂಗ್ನಲ್ಲಿ ಅಗ್ರ 100 ರೊಳಗಿನ ಸ್ಥಾನದಲ್ಲಿರುವ ಹಲವರು ಭಾಗವಹಿಸಲಿದ್ದಾರೆ.
ಫೆಬ್ರುವರಿ 9 ಮತ್ತು 10 ರಂದು ಅರ್ಹತಾ ಸುತ್ತಿನ ಪಂದ್ಯಗಳು ಹಾಗೂ 11ರಿಂದ ಪ್ರಧಾನ ಹಂತದ ಪಂದ್ಯಗಳು ನಡೆಯಲಿವೆ. ಟೂರ್ನಿಯು ಒಟ್ಟು ₹ 1 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದ್ದು ಚಾಂಪಿಯನ್ ಆಟಗಾರನಿಗೆ ₹ 30 ಸಾವಿರ ನಗದು ಬಹುಮಾನ ಲಭಿಸಲಿದೆ.