ಧಾರವಾಡ: ನಿರೀಕ್ಷೆಯಂತೆ ತೀವ್ರ ಹೋರಾಟ ಕಂಡುಬಂದ ಸೆಮಿಫೈನಲ್ನಲ್ಲಿ ಅಂತರರಾಷ್ಟ್ರೀಯ ಆಟಗಾರ ರಾಮಕುಮಾರ್ ರಾಮನಾಥನ್ ಮತ್ತು ಮೂರನೇ ಶ್ರೇಯಾಂಕದ ದಿಗ್ವಿಜಯ ಪ್ರತಾಪ್ ಸಿಂಗ್ ಅವರು ತಮ್ಮ ಎದುರಾಳಿಗಳನ್ನು ಸೋಲಿಸಿ ಐಟಿಎಫ್ ಟೂರ್ನಿಯ ಸಿಂಗಲ್ಸ್ ಫೈನಲ್ ತಲುಪಿದರು. ಇದರೊಂದಿಗೆ ಪ್ರಶಸ್ತಿ ಭಾರತೀಯ ಆಟಗಾರರ ಪಾಲಾಗುವುದು ಖಚಿತವಾಯಿತು.
ಪುರುಷರ ಡಬಲ್ಸ್ನಲ್ಲಿ ಮೂರನೇ ಶ್ರೇಯಾಂಕದ ಎಸ್.ಡಿ. ಪ್ರಜ್ವಲ್ ದೇವ್ ಮತ್ತು ನಿತಿನ್ಕುಮಾರ್ ಸಿನ್ಹಾ ಜೋಡಿ ಪ್ರಶಸ್ತಿ ಗೆದ್ದುಕೊಂಡಿತು. ಈ ಜೋಡಿ 6–4, 6–3 ರಿಂದ ಶ್ರೇಯಾಂಕರಹಿತ ಜೋಡಿಯಾದ ಸಾಯಿ ಕಾರ್ತಿಕ್ ರೆಡ್ಡಿ ಗಂಟಾ–ಮನೀಶ್ ಸುರೇಶ್ ಕುಮಾರ್ ಜೋಡಿಯನ್ನು ಸೋಲಿಸಿತು. ವಿಜೇತ ಜೋಡಿ ₹1,25,000 ಬಹುಮಾನ ಪಡೆದರೆ, ರನ್ನರ್ ಅಪ್ ಜೋಡಿ ₹75,000 ಬಹುಮಾನ ಪಡೆಯಿತು.
ಸಿಂಗಲ್ಸ್ ಸೆಮಿಫೈನಲ್ನಲ್ಲಿ ನಾಲ್ಕನೇ ಶ್ರೇಯಾಂಕದ ರಾಮಕುಮಾರ್ ರಾಮನಾಥನ್ ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿ 3–6, 6–3, 7–6 (2) ರಿಂದ ಅಗ್ರ ಶ್ರೇಯಾಂಕದ ನಿಕ್ ಚಾಪೆಲ್ ಅವರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ದಿಗ್ವಿಜಯ ಪ್ರತಾಪ್ ಸಿಂಗ್ ಒಂದು ಸೆಟ್ ಕಳೆದುಕೊಂಡರೂ ಅಂತಿಮವಾಗಿ ಎರಡನೇ ಶ್ರೇಯಾಂಕದ ಬೊಬ್ರೊವ್ ಬೊಗ್ದಾನ್ ಅವರನ್ನು 6–4, 6–7 (2), 6–4 ರಿಂದ ಸೋಲಿಸಿದರು. ಫೈನಲ್ ಪಂದ್ಯ ಭಾನುವಾರ ಬೆಳಿಗ್ಗೆ ನಡೆಯಲಿದೆ.
ಧಾರವಾಡ ಜಿಲ್ಲಾ ಲಾನ್ ಟೆನಿಸ್ ಸಂಸ್ಥೆ ಕೋರ್ಟ್ನಲ್ಲಿ ಸೇರಿದ್ದ ಜನರಿಗೆ ರಾಮಕುಮಾರ್– ಚಾಪೆಲ್ ಸೆಣಸಾಟ ನಿರಾಸೆ ಮೂಡಿಸಲಿಲ್ಲ. ನಿಕ್ ಚಾಪೆಲ್, ಎದುರಾಳಿಯ ಮೂರನೇ ಗೇಮ್ ಬ್ರೇಕ್ ಮಾಡಿ ಮೊದಲ ಸೆಟ್ನಲ್ಲಿ 4–1 ಮುನ್ನಡೆ ಸಾಧಿಸಿದರಲ್ಲದೇ ಅಂತಿಮವಾಗಿ 6–3ರಲ್ಲಿ ಸೆಟ್ ಗೆದ್ದರು. ಪ್ರಬಲ ಸರ್ವ್ ಜೊತೆಗೆ ಬೇಸ್ಲೈನಲ್ನಲ್ಲಿ ಚುರಕಿನ ಓಡಾಟದ ಎದುರು ಭಾರತದ ಡೇವಿಸ್ ಕಪ್ ಆಟಗಾರ ಹಿನ್ನಡೆ ಕಂಡರು. ಆದರೆ ಎರಡನೇ ಸೆಟ್ನಲ್ಲಿ 28 ವರ್ಷದ ರಾಮನಾಥನ್, ಪ್ರೇಕ್ಷಕರ ಬೆಂಬಲದ ನಡುವೆ ಪ್ರತಿಹೋರಾಟ ತೋರಿದರು. ನಾಲ್ಕನೇ ಗೇಮ್ನಲ್ಲಿ ದೊರೆತ ಬ್ರೇಕ್ ಅವರಿಗೆ ಸೆಟ್ ಗೆಲ್ಲಲು ನೆರವಾಯಿತು.
ಮೂರನೇ ಸೆಟ್ನಲ್ಲಿ ರಾಮಕುಮಾರ್ ಸೋಲಿನತ್ತ ಸಾಗಿದ್ದರು. ಆದರೆ 2–5 ಹಿನ್ನಡೆಯಿಂದ ಅವರು ಚೇತರಿಸಿಕೊಂಡ ರೀತಿ ರೋಚಕವಾಗಿತ್ತು. ಈ ಸೆಟ್ ಟೈಬ್ರೇಕರ್ಗೆ ಹೋಗಿ ಅಂತಿಮವಾಗಿ ರಾಮಕುಮಾರ್ 7–2ರಲ್ಲಿ ಗೆದ್ದರು. ಇತ್ತೀಚೆಗಷ್ಟೇ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ ಡಬಲ್ಸ್ನಲ್ಲಿ ಅವರು ಚಿನ್ನ ಗೆದ್ದಿದ್ದ ರಾಮನಾಥನ್, ಎದುರಾಳಿಯ ಹೊಡೆತ ಹೊರಹೋಗುತ್ತಿದ್ದಂತೆ ಪ್ರೇಕ್ಷಕರತ್ತ ತಿರುಗಿ ಬೆಂಬಲಕ್ಕೆ ಧನ್ಯವಾದ ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.