ಬೆಂಗಳೂರು: ಅಪೂರ್ವ ಸಾಮರ್ಥ್ಯ ತೋರಿದ ಕರ್ನಾಟಕದ ಸುರಭಿ ಶ್ರೀನಿವಾಸ್, ಪಂಜಾಬ್ನ ಜಲಂದರ್ನಲ್ಲಿ ನಡೆದ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್ಷಿಪ್ ಸೀರಿಸ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
ಗುರುವಾರ ನಡೆದ ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ರಾಜ್ಯದ ಆಟಗಾರ್ತಿ 6–3, 6–2 ನೇರ ಸೆಟ್ಗಳಿಂದ ಅಸ್ಸಾಂನ ತನಿಷ್ಕಾ ಪಾಲಾರ್ ಅವರನ್ನು ಸೋಲಿಸಿದರು.
ಬೆಂಗಳೂರಿನ ಲಿಟಲ್ ಫ್ಲವರ್ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಸುರಭಿ, ಮೊದಲ ಸೆಟ್ನ ಶುರುವಿನಿಂದಲೂ ಪ್ರಾಬಲ್ಯ ಮೆರೆದರು. ಎರಡನೇ ಸೆಟ್ನಲ್ಲೂ ರಾಜ್ಯದ ಆಟಗಾರ್ತಿ ಶರವೇಗದ ಸರ್ವ್ ಮತ್ತು ಬಲಿಷ್ಠ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.
ಇದಕ್ಕೂ ಮೊದಲು ನಡೆದಿದ್ದ ನಾಲ್ಕರ ಘಟ್ಟದ ಹೋರಾಟದಲ್ಲಿ ಸುರಭಿ 6–1, 4–6, 6–3ರಲ್ಲಿ ಮಹಾರಾಷ್ಟ್ರದ ಸಾರಾ ಅವರನ್ನು ಸೋಲಿಸಿದ್ದರು.
ಮೊದಲ ಸೆಟ್ನಲ್ಲಿ ಸುರಭಿ ಸುಲಭವಾಗಿ ಗೆದ್ದರು. ಆದರೆ ಮರು ಸೆಟ್ನಲ್ಲಿ ತಿರುಗೇಟು ನೀಡಿದ ಸಾರಾ 1–1 ಸಮಬಲಕ್ಕೆ ಕಾರಣರಾದರು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್ನಲ್ಲಿ ಛಲದಿಂದ ಹೋರಾಡಿದ ಕರ್ನಾಟಕದ ಆಟಗಾರ್ತಿ ಗೆಲುವಿನ ತೋರಣ ಕಟ್ಟಿದ್ದರು.