ಬೆಂಗಳೂರು: ಭಾರತ ಮತ್ತು ಇಂಗ್ಲೆಂಡ್ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯುವ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರವೇ ಟಿಕೆಟ್ ಪಡೆಯಲು ಕ್ರೀಡಾ ಪ್ರೇಮಿಗಳು ಕಾದು ಕುಳಿತಿರುವ ದೃಶ್ಯ ಕಂಡು ಬಂದಿತು.
ಐಸಿಸಿ ಮೊದಲು ನಿರ್ಧರಿಸಿದಂತೆ ಈ ಪಂದ್ಯ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ನಿಗದಿತ ಅವಧಿಯಲ್ಲಿ ಪಿಚ್ ತಯಾರಾಗದ ಕಾರಣ ಎರಡು ಬಲಿಷ್ಠ ತಂಡಗಳು ಸೆಣಸುವುದನ್ನು ನೋಡುವ ಅವಕಾಶ ಕರ್ನಾಟಕದ ಪಾಲಿಗೆ ಅನಿರೀಕ್ಷಿತವಾಗಿ ಒಲಿದು ಬಂದಿತು. ಆದ್ದರಿಂದಲೇ ಈ ಪಂದ್ಯಕ್ಕೆ ಟಿಕೆಟ್ ಪಡೆಯಲು ಕ್ರೀಡಾ ಪ್ರೇಮಿಗಳು ಮುಗಿಬಿದ್ದಿದ್ದಾರೆ.
ಪಂದ್ಯವನ್ನಾಡುವ ಉಭಯ ತಂಡಗಳು ಬಲಿಷ್ಠವಾದ ಕಾರಣ ಟಿಕೆಟ್ ಪಡೆಯಲು ಕ್ರೀಡಾಪ್ರೇಮಿಗಳು ಹರಸಾಹಸವೇ ಮಾಡಬೇಕಿದೆ. ಪಂದ್ಯ ಕೋಲ್ಕತ್ತದಿಂದ ಬೆಂಗಳೂರಿಗೆ ಅನಿರೀಕ್ಷಿತವಾಗಿ ವರ್ಗವಾದ ಹಿನ್ನೆಲೆಯಲ್ಲಿ ಇಂಗ್ಲೆಂಡ್, ಐಸಿಸಿ, ಬಿಸಿಸಿಐ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆಗೆ ಬಹುತೇಕ ಟಿಕೆಟ್ಗಳನ್ನು ಹಂಚಲಾಗಿದೆ. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಮಾತ್ರ ಟಿಕೆಟ್ ಇದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಕೆಎಸ್ಸಿಎ ತಿಳಿಸಿದೆ.
ಕೆಎಸ್ಸಿಎ ಸದಸ್ಯರಿಗೆ ಬುಧವಾರ ಟಿಕೆಟ್ ನೀಡಲಾಯಿತು. ಸಾರ್ವಜನಿಕರಿಗೆ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಟಿಕೆಟ್ ವಿತರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಚೇರಿಯ ಮಾಧ್ಯಮ ವಕ್ತಾರ ಸುಜಿತ್ ಸೋಮ್ಸುಂದರ್ ಹೇಳಿದ್ದಾರೆ.
ಇಂದು ಅಗ್ನಿ ಶಾಮಕ ದಳದ ತಪಾಸಣೆ
‘ವಿಶ್ವಕಪ್ ಕ್ರಿಕೆಟ್ನ ಪಂದ್ಯ ಇದೇ ಭಾನುವಾರ ನಡೆಯಲಿರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಲೂ ಅಗ್ನಿ ಅನಾಹುತ ಸಂಭವಿಸದಂತೆ ಕೈಗೊಂಡಿರುವ ರಕ್ಷಣಾ ಕ್ರಮಗಳ ಬಗ್ಗೆ ಗುರುವಾರ ಅಗ್ನಿ ಶಾಮಕ ದಳ ಕ್ರೀಡಾಂಗಣದ ಪರಿಶೀಲನೆ ನಡೆಸಲಿದೆ.
‘ಅಗ್ನಿ ಶಾಮಕ ತಂಡವು ರಕ್ಷಣಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದು, ಈ ಕುರಿತು ಕೆಎಸ್ಸಿಎಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುವುದು’ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಡಿ.ವಿ. ಗುರುಪ್ರಸಾದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.