ಬೆಂಗಳೂರು: ಎಎಸ್ಸಿ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಆಶ್ರಯದ `ಕರ್ನಾಟಕ ವಾಲಿ ಲೀಗ್' ಚಾಂಪಿಯನ್ಷಿಪ್ನ ಶನಿವಾರದ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು 3-1ರಿಂದ ಸೋಲಿಸಿದರು.
ಮಲ್ಲೇಶ್ವರದ ಕೋದಂಡರಾಮಪುರದ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿಜಯೀ ತಂಡದವರು ಮೊದಲ ಸೆಟ್ ಅನ್ನು 25-20ರಿಂದ ಗೆದ್ದರಾದರೂ, ಎರಡನೇ ಸೆಟ್ನಲ್ಲಿ ತೀವ್ರ ಪೈಪೋಟಿ ಕಂಡು ಬಂದು 28-30ರಿಂದ ಸೋಲನುಭವಿಸಿದರು. ಆದರೆ ನಂತರದ ಎರಡು ಸೆಟ್ಗಳನ್ನು 25-16, 25-18ರಿಂದ ಗೆದ್ದರು.
ಎಎಸ್ಸಿ ಪರ ಆದರ್ಶ್, ಜಿತು ಥಾಮಸ್ ಮತ್ತು ಶಿಜು ಆಂಟನಿ ಉತ್ತಮವಾಗಿ ಆಡಿದರೆ, ರಾಜ್ಯ ಪೊಲೀಸ್ ತಂಡದ ಪರ ನಾಗೇಶ್ ಮತ್ತು ಗಿರೀಶ್ ಗಮನ ಸೆಳೆದರು.
ಎಂ.ಇ.ಜಿ. ತಂಡದವರು 30-28, 21-25, 25-17, 25-23 ರಿಂದ ಬಿಎಸ್ಎನ್ಎಲ್ ತಂಡವನ್ನು ಮಣಿಸಿದರು. ಎಂ.ಇ.ಜಿ. ತಂಡದ ಪರ ಜಿಶೆದ್, ಸುಮೇಶ್, ಗವಾಸ್ ಮಿಂಚಿದರೆ, ಬಿ.ಎಸ್.ಎನ್.ಎಲ್. ತಂಡದ ಪರ ಕಾರ್ತಿಕ್ ಮತ್ತು ಸುಜಿತ್ ಅವರ ಉತ್ತಮ ಆಟ ಆ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ಯಶಸ್ಸು ಪಡೆಯಲಿಲ್ಲ.
ಇನ್ನೊಂದು ಪಂದ್ಯದಲ್ಲಿ ಜೀವವಿಮಾ ನಿಗಮ (ಎಲ್ಐಸಿ) ತಂಡದವರು 25-21, 25-21, 25-23ರಿಂದ ಡಿವೈಎಸ್ಎಸ್ ತಂಡವನ್ನು ಸೋಲಿಸಿದರು.