ಬೆಂಗಳೂರು: ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಮಿಸಿರುವ ಅಂತರರಾಷ್ಟ್ರೀಯ ದರ್ಜೆಯ ಸೌಲಭ್ಯ ಹೊಂದಿರುವ `ರಾಯಲ್ ಚಾಲೆಂಜರ್ಸ್ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ~ ಸೋಮವಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಈ ಅಕಾಡೆಮಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಉದ್ಘಾಟಿಸಿದರು. ಹೈಟೆಕ್ ತಂತ್ರಜ್ಞಾನ ಬಳಸಿ ಕೋಚಿಂಗ್ ನೀಡಲು ಸಂಸ್ಥೆ ಮುಂದಾಗಿರುವ `ಕಾಗ್ನಿಟೀವ್ ವಿಡಿಯೊ ಬೇಸ್ಡ್ ಕೋಚಿಂಗ್~ (ಸಿವಿಬಿಸಿ) ತಂತ್ರಜ್ಞಾನದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಸಿಎಂ ಬ್ಯಾಟಿಂಗ್ ಕೂಡ ಮಾಡಿದರು. ಎರಡು ಎಸೆತ ಎದುರಿಸಿದ ಅವರಿಗೆ ರೋಜರ್ ಬಿನ್ನಿ ಬೌಲಿಂಗ್ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಜಿ.ಆರ್.ವಿಶ್ವನಾಥ್, ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್ ಬ್ಯಾಟಿಂಗ್ ಬಗ್ಗೆ ಕೆಲವೊಂದು ಸಲಹೆ ನೀಡಿದರು.
ನೂತನ ಅಕಾಡೆಮಿಗೆ ಶುಭ ಕೋರಿದ ಸದಾನಂದ ಗೌಡ, `ಅಕಾಡೆಮಿಗೆ ಯಾವುದೇ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಭಾರತ ತಂಡದಲ್ಲಿ ಕರ್ನಾಟಕದ ಹೆಚ್ಚಿನಆಟಗಾರರು ಆಡಲಿ~ ಎಂದರು.
ಈ ಅಕಾಡೆಮಿಯಲ್ಲಿ 14ರಿಂದ 19 ವರ್ಷ ವಯಸ್ಸಿನೊಳಗಿನ 420 ಆಟಗಾರರಿಗೆ ತರಬೇತಿ ನೀಡಲಾಗುತ್ತದೆ. `ಮುಂದಿನ ದಿನಗಳಲ್ಲಿ ಮೈಸೂರು, ಮಂಗಳೂರು, ತುಮಕೂರು ಹಾಗೂ ಹುಬ್ಬಳ್ಳಿಗೂ ಅಕಾಡೆಮಿಯನ್ನು ವಿಸ್ತರಿಸಲಾಗುವುದು~ ಎಂದು ಶ್ರೀನಾಥ್ ಹೇಳಿದರು.