ಬೆಂಗಳೂರು: ಕರ್ನಾಟಕದ ಬಿ.ಆರ್. ನಿಕ್ಷೇಪ್ ಮತ್ತು ತಮಿಳುನಾಡಿನ ಆರ್. ಅಭಿನಿಕಾ ಅವರು ಆರ್.ಟಿ. ನಾರಾಯಣ್ ಸ್ಮಾರಕ ಎಐಟಿಎ ರಾಷ್ಟ್ರೀಯ ಟೆನಿಸ್ ಸರಣಿಯ 16 ವರ್ಷದೊಳಗಿನವರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು.
ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಕೋರ್ಟ್ನಲ್ಲಿ ಭಾನುವಾರ ನಡೆದ ಬಾಲಕರ ವಿಭಾಗದ ಫೈನಲ್ ಹಣಾಹಣಿಯಲ್ಲಿ ಅಗ್ರ ಶ್ರೇಯಾಂಕದ ನಿಕ್ಷೇಪ್ 6–3, 6–2ರಿಂದ ಒಂಬತ್ತನೇ ಶ್ರೇಯಾಂಕದ ಮಹಾರಾಷ್ಟ್ರದ ರಿಯಾನ್ ಪಂಡೊಲೆ ಎದುರು ಗೆಲುವು ಸಾಧಿಸಿದರು.
ಸ್ಥಳೀಯ ಆಟಗಾರ ನಿಕ್ಷೇಪ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದರು. ಅವರ ಆಟ ನೋಟಲು ಸಾಕಷ್ಟು ಟೆನಿಸ್ ಪ್ರೇಮಿಗಳು ಸೇರಿದ್ದರು. ಮೊದಲ ಸೆಟ್ನಲ್ಲಿ 4–0ರಲ್ಲಿ ಮುನ್ನಡೆ ಹೊಂದಿದ್ದ ಆತಿಥೇಯ ಆಟಗಾರ ಮುನ್ನಡೆಯನ್ನು ಕೊನೆಯ ತನಕವೂ ಮುಂದುವರಿಸಿದರು. ಈ ಗೆಲುವಿನ ಮೂಲಕ ನಿಕ್ಷೇಪ್ 75 ಪಾಯಿಂಟ್ಗಳನ್ನು ಪಡೆದರು. ರಿಯಾನ್ 50 ಪಾಯಿಂಟ್ ತಮ್ಮದಾಗಿಸಿಕೊಂಡರು.
‘ಇಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸವಿತ್ತು. ಏಕೆಂದರೆ, ಈ ಟೂರ್ನಿಗೆ ಮೊದಲು ಮುಂಬೈಯಲ್ಲಿ ಚೊಚ್ಚಲ ಐಟಿಎಫ್ ಟೂರ್ನಿಯಲ್ಲಿ ಆಡಿದ್ದೆ. ಅಲ್ಲಿ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದೆ. ಅನುಭವಿ ಆಟಗಾರರ ಜೊತೆ ಆಡಿದ ಕಾರಣ ಕೆಲ ವಿಷಯಗಳನ್ನು ಕಲಿಯಲು ಸಾಧ್ಯವಾಯಿತು. ವರ್ಷದ ಕೊನೆಯಲ್ಲಿ ಮತ್ತೊಂದು ಟ್ರೋಫಿ ಗೆದ್ದುಕೊಳ್ಳಲು ಸಾಧ್ಯವಾಗಿದ್ದು ಖುಷಿ ನೀಡಿದೆ’ ಎಂದು ನಿಕ್ಷೇಪ್ ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.
ಅಭಿನಿಕಾಗೆ ಪ್ರಶಸ್ತಿ: ಬಾಲಕಿಯರ ವಿಭಾಗದಲ್ಲಿ ಪಾರಮ್ಯ ಮೆರೆದ ತಮಿಳುನಾಡಿನ ಅಭಿನಿಕಾ ಪ್ರಶಸ್ತಿ ಘಟ್ಟದ ಹೋರಾಟದಲ್ಲಿ 6–4, 6–0ರಲ್ಲಿ ಮಹಾರಾಷ್ಟ್ರದ ಸ್ನೇಹಲ್ ಮಾನೆ ಅವರನ್ನು ಮಣಿಸಿದರು.
ಮಾಜಿ ರಾಷ್ಟ್ರೀಯ ಚಾಂಪಿಯನ್ ರುಷ್ಮಿ ಚಕ್ರವರ್ತಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅಭಿನಿಕಾ ಜಯಿಸಿದ ಮೊದಲ ರಾಷ್ಟ್ರೀಯ ಎಐಟಿಎ ಪ್ರಶಸ್ತಿ ಇದಾಗಿದೆ. ಸಂಸದೆ ರಮ್ಯಾ ಪ್ರಶಸ್ತಿ ಪ್ರದಾನ ಮಾಡಿದರು.