ಬೆಂಗಳೂರು: ರಣಜಿ ಟ್ರೋಫಿ ಟೂರ್ನಿಯ ಪಂದ್ಯಗಳಿಗೆ ಬೇರೆ ಕ್ರಿಕೆಟ್ ಸಂಸ್ಥೆಗಳ ಪಿಚ್ ಕ್ಯೂರೇಟರ್ ಅನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೇಮಕ ಮಾಡಿದೆ. ಆದ್ದರಿಂದ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಬಿಸಿಸಿಐ ದಕ್ಷಿಣ ವಲಯದ ಕ್ಯೂರೇಟರ್ ವಿಶ್ವನಾಥ್ ಪಿಚ್ ಸಜ್ಜು ಮಾಡಿದರು.
ಎಂಟರ ಘಟ್ಟದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಬಿಸಿಸಿಐ ಮೊದಲು ನಿರ್ಧರಿಸಿತ್ತು. ವಡೋದರ ದಲ್ಲಿ ನಡೆಯಲಿರುವ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರ ನಡುವಿನ ಪಂದ್ಯ ಮಾತ್ರ ತಟಸ್ಥ ಸ್ಥಳವಾಗಿದೆ. ಉಳಿದಂತೆ ಕರ್ನಾಟಕ (ಬೆಂಗಳೂರು), ಮುಂಬೈ (ಮುಂಬೈ) ಮತ್ತು ಬಂಗಾಳ (ಕೋಲ್ಕತ್ತ) ತವರಿನ ಕ್ರೀಡಾಂಗಣದಲ್ಲಿಯೇ ಎಂಟರ ಘಟ್ಟದ ಪಂದ್ಯಗಳು ನಡೆಯಲಿವೆ.
‘ರಣಜಿ ಪಂದ್ಯಗಳಿಗೆ ಆತಿಥ್ಯ ವಹಿಸುವ ಕ್ರಿಕೆಟ್ ಸಂಸ್ಥೆಗಳ ಪಿಚ್ ಕ್ಯೂರೇಟರ್ಗಳಿಗೆ ಪಿಚ್ ಸಜ್ಜುಮಾಡಲು ಬಿಸಿಸಿಐ ಈ ಸಲ ಅನುಮತಿ ನೀಡಿಲ್ಲ. ಆದ್ದರಿಂದ ಇಲ್ಲಿಗೆ ಬೇರೆ ಪಿಚ್ ಕ್ಯೂರೇಟರ್ ಬಂದಿದ್ದಾರೆ’ ಎಂದು ಚಿನ್ನಸ್ವಾಮಿ ಅಂಗಳದ ನೂತನ ಪಿಚ್ ಕ್ಯೂರೇಟರ್ ಶ್ರೀರಾಮ್ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.