ರಾಂಚಿ (ಐಎಎನ್ಎಸ್): ಹತ್ತನೇ ವಿಶ್ವಕಪ್ ಜಯಿಸಿದ ನಂತರ ಇದೇ ಮೊದಲ ಬಾರಿಗೆ ತವರೂರಿಗೆ ಆಗಮಿಸಿದ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲಾಯಿತು.
ವಿಶ್ವಕಪ್ ನಂತರ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಾದ್ದರಿಂದ ದೋನಿ ಅವರಿಗೆ ತವರೂರು ರಾಂಚಿಗೆ ಹೋಗಲು ಸಾಧ್ಯವಾಗಿರಲಿಲ್ಲ. ದೋನಿ ತವರಿಗೆ ಆಗಮಿಸುವ ವಿಷಯ ತಿಳಿದಿದ್ದ ಕ್ರೀಡಾ ಪ್ರೇಮಿಗಳು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದ ಬಳಿ ಭಾರಿ ಸಂಖ್ಯೆಯಲ್ಲಿ ನೆರದಿದ್ದರು.
ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ನಡುವೆಯೂ ಪತ್ನಿ ಸಾಕ್ಷಿ ಸಿಂಗ್ ರಾವತ್ ಜೊತೆಗೆ ದೋನಿ ಭಾರಿ ಬಿಗಿ ಭದ್ರತೆಯಲ್ಲಿ ತಮ್ಮ ಮನೆಗೆ ತೆರಳಿದರು. ನಾಯಕನಿಗೆ ತವರೂರಲ್ಲಿ ಅದ್ದೂರಿ ಸ್ವಾಗತ ನೀಡಿದ ಅಭಿಮಾನಿಗಳು ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು.
ದೋನಿ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕರಾಗಿದ್ದರು. ಅಷ್ಟೇ ಅಲ್ಲದೇ ದೋನಿ ನೇತೃತ್ವದಲ್ಲಿ ಐಪಿಎಲ್ನ ನಾಲ್ಕನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿತ್ತು.
ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ವಿಶ್ವಕಪ್ ಜಯಿಸಿದ 28 ವರ್ಷಗಳ ನಂತರ ಭಾರತ ದೋನಿ ನೇತೃತ್ವದಲ್ಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು.