ಶಿವಮೊಗ್ಗ: ನಗರದ ನವುಲೆ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿದೆ. ಅ. 24 ರಿಂದ ನಡೆಯುವ ನಾಲ್ಕು ದಿನಗಳ ಪಂದ್ಯದಲ್ಲಿ ಕರ್ನಾಟಕ, ಹೈದರಾಬಾದ್ ತಂಡವನ್ನು ಎದುರಿಸಲಿದ್ದು, ಇದಕ್ಕಾಗಿ ಹೊಸ ಕ್ರೀಡಾಂಗಣ ಸಜ್ಜುಗೊಂಡಿದೆ.
ಈಗಾಗಲೇ ಶಿವಮೊಗ್ಗ ನಗರ ಮತ್ತು ಜಿಲ್ಲೆಯ ವಿವಿಧ ಕ್ರೀಡಾಂಗಣಗಳಲ್ಲಿ ರಣಜಿ ಸೇರಿದಂತೆ ಕೆಲವು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳು ನಡೆದಿದ್ದರೂ, ಕೆಎಸ್ಸಿಎ ನಿಂದ ನಿರ್ಮಿಸಿರುವ ಈ ಕ್ರೀಡಾಂಗಣದಲ್ಲಿ ಇದೆ ಮೊದಲ ಬಾರಿಗೆ ಪಂದ್ಯ ನಡೆಯುತ್ತಿದೆ. ಈ ನೂತನ ಕ್ರೀಡಾಂಗಣವು ರಣಜಿ ಆರಂಭದ ದಿನವೇ ಉದ್ಘಾಟನೆಯಾಗುತ್ತಿದೆ ಎಂದು ಶಿವಮೊಗ್ಗ ವಲಯ ಸಂಚಾಲಕ ಡಿ.ಆರ್. ನಾಗರಾಜ್ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಉಚಿತ ಪ್ರವೇಶ: ಪಂದ್ಯ ಪ್ರತಿದಿನ ಬೆಳಿಗ್ಗೆ 9.30ರಿಂ ದ ಸಂಜೆ 4.30ರವರೆಗೆ ನಡೆಯಲಿದ್ದು, ಕ್ರಿಕೆಟ್ಪ್ರಿಯರಿಗೆ ಉಚಿತ ಪ್ರವೇಶವಿದೆ.
ಸಕಲ ಸಿದ್ಧತೆ: ವೀಕ್ಷಕರಿಗೆ ಕ್ರೀಡಾಂಗಣದ ಸುತ್ತಲೂ ಹುಲ್ಲುಹಾಸಿನ ಮೇಲೆ ಕೂರುವ ವ್ಯವಸ್ಥೆ ಮಾಡಲಾಗಿದೆ ಎಂದು ಶಿವಮೊಗ್ಗ ವಲಯದ ಅಧ್ಯಕ್ಷ ಸುಕುಮಾರ್ ಪಟೇಲ್ ವಿವರ ನೀಡಿದರು. ವೀಕ್ಷಕರಿಗೆ 2 ದ್ವಾರಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಮೊದಲ ದ್ವಾರದ ಮೂಲಕ ಸಾರ್ವಜ
ನಿಕರು ಹಾಗೂ ಮತ್ತೊಂದು ದ್ವಾರದ ಮೂಲಕ ಆಹ್ವಾನಿತರಿಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ಹಾಗೂ ನಾಲ್ಕುಚಕ್ರದ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದರು.