ಮುಂಬೈ (ಪಿಟಿಐ): ಸ್ಪಾಟ್-ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ದಂದೆಗೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಖ್ಯಾತ ಕುಸ್ತಿಪಟು ದಾರಾಸಿಂಗ್ ಅವರ ಪುತ್ರ ವಿಂದು ದಾರಾಸಿಂಗ್ ಹಾಗೂ ಗುರುನಾಥ್ ಮೇಯಪ್ಪನ್ ಅವರಿಗೆ ಮುಂಬೈ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ವಿಂದೂ ದಾರಾಸಿಂಗ್, ಗುರುನಾಥ್ ಮೇಯಪ್ಪನ್ ಹಾಗೂ ಇನ್ನಿತರ 6 ಮಂದಿ ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶರು ಅಂತಿಮವಾಗಿ ಅವರಿಗೆ ಜಾಮೀನು ನೀಡಿದರು. ದೇಶ ಬಿಟ್ಟು ತೆರಳದಂತೆ ಹಾಗೂ ದಿನಬಿಟ್ಟು ದಿನ ಅಪರಾಧ ದಳದ ಪೊಲೀಸರೆದುರು ಹಾಜರಾಗುವಂತೆ ಸೂಚನೆ ನೀಡಿದರು.
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ಮಾಫಿಯಾದೊಂದಿಗೆ ಸಂಪರ್ಕ ಬೆಳೆಸಿದ ಆರೋಪದ ಮೇಲೆ ವಿಂದು ದಾರಾಸಿಂಗ್ ಹಾಗೂ ಗುರುನಾಥ್ ಮೇಯಪ್ಪನ್ ಅವರನ್ನು ಕೆಲ ದಿನಗಳ ಹಿಂದೆಯಷ್ಟೆ ಪೊಲೀಸರು ಬಂಧಿಸಿದ್ದರು.