ಬೆಂಗಳೂರು: ನಗರದಲ್ಲಿ ಶನಿವಾರ ಮಧ್ಯರಾತ್ರಿ ಆಯೋಜಿಸಿದ್ದ ‘ಮಿಡ್ನೈಟ್ ಮ್ಯಾರಥಾನ್’ನಲ್ಲಿ ಪಾಲ್ಗೊಂಡಿದ್ದ 250 ಮಹಿಳೆಯರು, ಭಯಮುಕ್ತವಾಗಿ 5 ಕಿ.ಮೀ ಓಡಿದರು.
‘ಒಬ್ಬ ಮಹಿಳೆ ಮಧ್ಯರಾತ್ರಿ 12 ಗಂಟೆಗೆ ಯಾವುದೇ ಭಯವಿಲ್ಲದೇ ನಡುರಸ್ತೆಯಲ್ಲಿ ಓಡಾಡಿದ ದಿನವೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ’ ಎಂಬ ಮಹಾತ್ಮ ಗಾಂಧೀಜಿಯವರ ಆಶಯದಂತೆ ನಗರದ ಪೊಲೀಸರು, ‘ಭಯಮುಕ್ತ ಓಟ’ ಹೆಸರಿನಲ್ಲಿ ಈ ಮ್ಯಾರಥಾನ್ ಹಮ್ಮಿಕೊಂಡಿದ್ದರು. ಅದಕ್ಕೆ ಸ್ವಯಂ ಸೇವಾ ಸಂಘಟನೆಗಳು ಸಹಕಾರ ನೀಡಿದ್ದವು.
ಪುರಭವನದ ಎದುರು ಸೇರಿದ್ದ ಮಹಿಳೆಯರು, ಜೈಕಾರಗಳನ್ನು ಕೂಗಿ ಮ್ಯಾರಥಾನ್ಗೆ ಮೆರುಗು ತಂದರು. ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ಕುಮಾರ್, ಧ್ವಜಾರೋಹಣ ನೆರವೇರಿಸುವ ಮೂಲಕ ಮ್ಯಾರಥಾನ್ಗೆ ಚಾಲನೆ ನೀಡಿದರು.
ಸ್ನೇಹಿತೆಯರು ಹಾಗೂ ಕುಟುಂಬಸ್ಥರ ಜೊತೆಯಲ್ಲಿ ಓಟ ಆರಂಭಿಸಿದ್ದ ಮಹಿಳೆಯರು, ರಸ್ತೆಯುದ್ದಕ್ಕೂ ಘೋಷಣೆಗಳನ್ನು ಕೂಗಿ ಮಹಿಳೆಯರಿಗೆ ಧೈರ್ಯ ಹೇಳಿದರು.
‘ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ನಮ್ಮ ಪೊಲೀಸ್ ಇಲಾಖೆ ದಿನವೂ ಶ್ರಮಿಸುತ್ತಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ಈ ಬಗ್ಗೆ ಅರಿವು ಮೂಡಿಸಲು ಈ ಮ್ಯಾರಥಾನ್ ಅನುಕೂಲವಾಯಿತು. ಇದೊಂದು ಉತ್ತಮ ಮ್ಯಾರಥಾನ್’ ಎಂದು ಸುನೀಲ್ಕುಮಾರ್ ತಿಳಿಸಿದರು.