ಬೆಂಗಳೂರು: ನಿಷ್ಠೆ, ಅರ್ಪಣಾಭಾವ ಮೈಗೂಡಿಸಿಕೊಂಡು ಹೋಗುವವರೇ ನಿಜವಾದ ಗುರು. ಆ ಸಾಲಿನಲ್ಲಿ ನಿಲ್ಲುವವರು ಸಿದ್ದಗಂಗಾಮಠದ ಶಿವಕುಮಾರ ಸ್ವಾಮೀಜಿ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.
ಅಂಜನಾನಗರದ ಬಿ.ಇ.ಎಲ್ ಬಡಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ಲಿಂಗೈಕ್ಯರಾದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಹಮ್ಮಿಕೊಂಡಿದ್ದ ಗೌರವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಶ್ರೇಷ್ಠ ಚೇತನಗಳ ಆದರ್ಶಗಳನ್ನುಮೈಗೂಡಿಸಿಕೊಳ್ಳಬೇಕು’ ಎಂದರು.
ಶಾಸಕ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆ ವಹಿಸಿ, ‘ತುಮಕೂರು ಜಿಲ್ಲೆಗೆಡಾ.ಶಿವಕುಮಾರಸ್ವಾಮಿ ಜಿಲ್ಲೆ ಎಂದು ಸರ್ಕಾರ ಘೋಷಿಸಬೇಕು’ ಎಂದರು.
ಸಅದಿಯ ಪದವಿ ಕಾಲೇಜು ಪ್ರಾಂಶುಪಾಲ ಮೌಲಾನಾ ಮಹಮ್ಮದ್ ಅನ್ವರ್, ‘ಶ್ರೀಗಳ ಆದರ್ಶ ನಮ್ಮೆಲ್ಲರಿಗೂ ದಾರಿದೀಪ’ ಎಂದು ಹೇಳಿದರು.
‘ಶ್ರೀಗಳ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು’ ಸಂತಫ್ರಾನ್ಸೀಸ್ ಫಾದರ್ ಸತೀಶ್ಕುಮಾರ್ ಕಪುಚಿನ್ ಎಂದರು.
ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ಸವಿತಾ ಗಣೇಶ್ ಪ್ರಸಾದ್, ಸವಿಗಾನ ಮಂಜು, ವಿಜಯಕುಮಾರ್ ಜಿತೂರಿ ಅವರಿಂದ ಗೀತಗಾಯನ, ಅಲ್ಲಮ ಕಲಾಶಾಲೆ ತಂಡದಿಂದ ನೃತ್ಯ ನಮನ ನಡೆಯಿತು.
ಅರಸುಗೆ ಸ್ವಾಮೀಜಿ ಪ್ರೇರಣೆ ಬೇಲಿಮಠದ ಶಿವರುದ್ರಸ್ವಾಮಿ, ‘ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೀಕರ ಬರಗಾಲ ಆವರಿಸಿ ಎಲ್ಲೆಡೆ ಸರ್ಕಾರ ಗಂಜಿ ಕೇಂದ್ರ ತೆರೆದಿತ್ತು. ತುಮಕೂರಿಗೆ ಬಂದಾಗ ಜನರನ್ನು ಕಂಡು ಜಾತ್ರೆ ಇದೆಯೇ ಎಂದು ಪ್ರಶ್ನಿಸಿ ಮಠಕ್ಕೆ ಭೇಟಿ ನೀಡಿದರು. ಅಲ್ಲಿ ದಾಸೋಹ ನೋಡಿ, ಸರ್ಕಾರದಿಂದ ಅಕ್ಕಿ ಪೂರೈಸುವುದಾಗಿ ಹೇಳಿದರು. ಅದಕ್ಕೆ ಶ್ರೀಗಳು ಒಪ್ಪದೆ ಭಕ್ತರು ನೀಡುತ್ತಾರೆ. ಅವರಿಂದ ಮಠದಲ್ಲಿ ದಾಸೋಹ ನಡೆಯುತ್ತದೆ ಎಂದರು. ಜನಪರ ಆಡಳಿತಕ್ಕೆ ಮಠವೇ ಪ್ರೇರಣೆ ಎಂದು ಅರಸು ಹೇಳುತ್ತಿದ್ದರು’ ಎಂದು ಸ್ಮರಿಸಿದರು.