ಬೀದರ್: ಕೃಷಿ ಭೂಮಿಯನ್ನು ಕೃಷಿಯೇತರ ಆಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸುವ ವಿವಿಧ ಇಲಾಖೆಗಳ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಮಾತನಾಡಿ, ‘ಭೂ ಪರಿವರ್ತನೆಯು ನಿಯಮಾನುಸಾರ ನಡೆಯಬೇಕಾದ ಕಾರ್ಯವಾಗಿದೆ. ಆದ್ದರಿಂದ ಆನ್ಲೈನ್ ಮೂಲಕ ಇಂತಹ ಅರ್ಜಿಗಳ ವಿಲೇವಾರಿಗೆ ತುರ್ತು ಗಮನ ಹರಿಸಬೇಕಿದೆ. ಆನ್ಲೈನ್ನಲ್ಲಿ ಭೂ ಪರಿವರ್ತನೆ ಮಾಡಬೇಕಾದ ಅವಶ್ಯಕತೆ ಇರುವುದರಿಂದ ಅದಕ್ಕೆ ತಕ್ಕಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿದ್ಧರಾಗಬೇಕು’ ಎಂದು ತಿಳಿಸಿದರು.
‘ಆಯಾ ಇಲಾಖೆಗಳ ಅಧಿಕಾರಿಗಳು ಅಭಿಪ್ರಾಯವನ್ನು ಆನ್ಲೈನ್ನಲ್ಲಿ ದಾಖಲಿಸಬೇಕು. ವರದಿಯನ್ನು ನಿಯಮಬದ್ಧವಾಗಿ ಹಾಗೂ ಕಾಲಮಿತಿಯೊಳಗೆ ಕೊಡಬೇಕು. ಯಾವುದೇ ಅಭಿಪ್ರಾಯ ಬಾರದಿದ್ದಲ್ಲಿ ತಮ್ಮ ಕಡೆಯಿಂದ ಯಾವುದೇ ಹೇಳಿಕೆ ಇಲ್ಲ ಎಂದು ಪರಿಗಣಿಸಿ ಮುಂದಿನ ಕ್ರಮ ವಹಿಸಲಾಗುತ್ತದೆ. ಮುಂದೆ ಆಗುವ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುತ್ತದೆ’ ಎಂದು ಎಚ್ಚರಿಸಿದರು.
ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಕೇಸ್ ವರ್ಕರ್ ಆಗಿರುತ್ತಾರೆ ಎಂದು ಮಾಹಿತಿ ನೀಡಿದ ತರಬೇತುದಾರ ಶ್ರೀಕಾಂತ ಸ್ವಾಮಿ ಅವರು, ಪಾವರ್ ಪ್ರಜೆಂಟೇಶನ್ ಮೂಲಕ ಆನಲೈನ್ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ಬಗೆ ಸೇರಿದಂತೆ ಇತರ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್ ಹಾಗೂ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಆಯುಕ್ತ ಶಂಕರ ವಣಕ್ಯಾಳ, ಗ್ಯಾನೇಂದ್ರಕುಮಾರ ಗಂಗವಾರ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.