ಬೆಂಗಳೂರು: ದರೋಡೆ ಪ್ರಕರಣದ ಆರೋಪಿಮೊಹಮದ್ ಅಶ್ರಫ್ ಖಾನ್ ಎಂಬಾತನನ್ನು ಕಾಲಿಗೆ ಗುಂಡು ಹೊಡೆದು ಇತ್ತೀಚೆಗಷ್ಟೇ ಬಂಧಿಸಿದ್ದ ಚಿಕ್ಕಜಾಲ ಪೊಲೀಸರು, ಆತನ ಮೂವರು ಸಹಚರರನ್ನು ಸೋಮವಾರ ಸೆರೆ ಹಿಡಿದಿದ್ದಾರೆ.
ಮೊಹಮ್ಮದ್ ಇಫ್ತಿಕ್ ಅಲಿ, ಸೈಯದ್ ಸುಹೇಲ್ ಅಲಿಯಾಸ್ ಜೊಯಾನ್ ಹಾಗೂ ಶೇಖ್ ಅಸ್ಗರ್ ಬಂಧಿತರು. ಅವರಿಂದ 2 ದ್ವಿಚಕ್ರ ವಾಹನ, 5 ಮೊಬೈಲ್, ಒಂದು ಬೆಳ್ಳಿ ಸರ ಹಾಗೂ ಎರಡು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
‘ಪ್ರಮುಖ ಆರೋಪಿ ಅಶ್ರಫ್ ಖಾನ್, ಸಹಚರರ ಗ್ಯಾಂಗ್ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸಾರ್ವಜನಿಕರು ಹಾಗೂ ಕ್ಯಾಬ್ ಚಾಲಕರನ್ನು ತಡೆದು, ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ. ಆ ಸಂಬಂಧ ಪ್ರಕರಣಗಳು ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳು, ಮತ್ತಷ್ಟು ಕಡೆ ದರೋಡೆ ಮಾಡಲು ಸಂಚು ರೂಪಿಸಿದ್ದರು. ಆ ಬಗ್ಗೆ ಮಾಹಿತಿ ಪಡೆದು ನ. 29ರಂದು ಭಾರತಿನಗರ ಬಳಿ ಗ್ಯಾಂಗ್ ಮೇಲೆ ದಾಳಿ ಮಾಡಲಾಗಿತ್ತು. ಅದೇ ವೇಳೆ ಅಶ್ರಫ್ ಖಾನ್ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದ. ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿತ್ತು. ಸಹಚರರು ಪರಾರಿಯಾಗಿದ್ದರು’ ಎಂದು ವಿವರಿಸಿದರು.