ಬೆಂಗಳೂರು: ಪಾರಂಪರಿಕ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ ಆರಂಭವಾಗಿದ್ದು, ಮೊದಲ ಹೆಜ್ಜೆಯಾಗಿ ಶುಕ್ರವಾರ ಬೆಳಗಿನ ಜಾವ ಧ್ವಜಾರೋಹಣ ನೆರವೇರಿತು.
ತಿಗಳಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ ತಳಿರು–ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದು, ಗುರುವಾರ ರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು.
ಕರಗಕರ್ತ ಅರ್ಚಕ ಮನು ದೇವಾಲಯದಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಸಿದರು. ಗೌಡರು, ಗಣಾಚಾರಿ ಹಾಗೂ ಗಂಟೆ ಪೂಜಾರಿಗಳ ಜತೆ ಮೊದಲನೇ ಸ್ನಾನಘಟ್ಟ ಕಬ್ಬ
ನ್ಪಾರ್ಕ್ನ ಕರಗದ ಕುಂಟೆಗೆ ತೆರಳಿದ ಮನು, ಪ್ರಥಮ ಪೂಜೆ, ಗಂಗೆ ಪೂಜೆ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಂಜೆ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
3,800 ವೀರಕುಮಾರರಿದ್ದು, ಅವರಲ್ಲಿ ದೀಕ್ಷಾ (ಕಂಕಣಬದ್ಧರು) ಬದ್ಧರಾದವರು ಮಡಿಯುಟ್ಟು ಮನೆ, ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಸಂಪಂಗಿ ಕೆರೆಯ ಅಂಗಳದಲ್ಲಿನ ಶಕ್ತಿ ಪೀಠದಲ್ಲಿ ಶನಿವಾರ ದ್ವಿತೀಯ ಪೂಜೆ ನಡೆಯಲಿದೆ. ಭಾನುವಾರ ಲಾಲ್ಬಾಗ್ ರಸ್ತೆಯ ಹೂವಿನ ತೋಟದಲ್ಲಿ, ಸೋಮವಾರ ಗವಿಪುರ ಗುಟ್ಟಹಳ್ಳಿಯ ಜಲಕಂಠೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ.
ಮಂಗಳವಾರ ಕೆಂಪೇಗೌಡ ವೃತ್ತದ ಅಣ್ಣಮ್ಮ ದೇವಸ್ಥಾನ, ಬುಧವಾರ ಕಬ್ಬನ್ ಪಾರ್ಕ್ನ ಕರಗದ ಕುಂಟೆ, ಗುರುವಾರ ಕಲಾಸಿಪಾಳ್ಯದ ಮರಿಸ್ವಾಮಿ ಮಠದಲ್ಲಿ ಪೂಜೆ ಜರುಗಲಿದೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಗೋಪಾಲ್ ತಿಳಿಸಿದರು.
ಹೂವಿನ ಕರಗ ಇದೇ 19ರಂದು ರಾತ್ರಿ 12.30ಕ್ಕೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಡುವ ಉತ್ಸವ ಹಲಸೂರು ಪೇಟೆಯ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ ಮಾರ್ಗವಾಗಿ ಕಬ್ಬನ್ ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ, ದೊಡ್ಡಪೇಟೆ, ಕೆ.ಆರ್. ಮಾರುಕಟ್ಟೆ, ಆಕ್ಕಿಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣ್ಣಕಲ್ ಪೇಟೆಗಳಲ್ಲಿ ಸಂಚರಿಸಲಿದೆ.
ಮಾರ್ಗದಲ್ಲಿ ಬದಲಾವಣೆ
ಇದೇ 19ರಂದು ನಡೆಯಲಿರುವ ಕರಗ ಶಕ್ತ್ಯೋತ್ಸವದ ಮಾರ್ಗದಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆ ಇದೆ.
ಕಾಟನ್ ಪೇಟೆ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಉತ್ಸವ ತೆರಳುವುದಿಲ್ಲ ಎಂಬ ಅನುಮಾನ ಇತ್ತು. ಆದರೆ, ಇನ್ನು ಎರಡು ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉತ್ಸವಕ್ಕೆ ಅನುಕೂಲ ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರಾಜಗೋಪಾಲ್ ತಿಳಿಸಿದರು.
ಆದರೆ, ಕೆಂಗೇರಿ ಗೇಟ್ ಪೊಲೀಸ್ ಠಾಣೆ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗೆದಿರುವುದನ್ನು ನೋಡಿದರೆ ಅಲ್ಲಿ ಉತ್ಸವ ಹೋಗಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯ ರಸ್ತೆಯಲ್ಲಿ ತೆರಳುವ ಆಲೋಚನೆ ಇದೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.