ಬೆಂಗಳೂರು:ರಾಜ್ಯ ನಗರ ಯೋಜನಾ ಮಂಡಳಿಯ ಆದಾಯ ಪ್ರತಿ ವರ್ಷ ಇಳಿಕೆಯಾಗುತ್ತಿರುವುದಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎರಡು ವರ್ಷಗಳ ಬಳಿಕ ನಗರದಲ್ಲಿ ನಡೆದ ಮಂಡಳಿಯ 68ನೇ ಸಭೆಯಲ್ಲಿ ಅವರು ಭಾಗವಹಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
‘ಆದಾಯ ಪ್ರತಿವರ್ಷ ಏರಿಕೆ ಆಗಬೇಕು. ಆದರೆ, 2016-17ರಲ್ಲಿ ₹ 21 ಕೋಟಿ,2017-18 ರಲ್ಲಿ ₹ 19 ಕೋಟಿ ಹಾಗೂ2018-19ನೇ ಸಾಲಿನಲ್ಲಿ ₹ 14 ಕೋಟಿ ಮಾತ್ರ ಆದಾಯ ಬಂದಿದೆ. ಪ್ರತಿವರ್ಷವೂ ವರಮಾನ ಇಳಿಕೆಯಾಗುತ್ತಿದೆ. ಕನಿಷ್ಠ ಶೇ 10ರಷ್ಟು ಹೆಚ್ಚಳವಾಗುವಂತೆ ನೋಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ನಗರ ಯೋಜನೆಗೆ ಸಂಬಂಧಿಸಿದಂತೆ ತರಬೇತಿಗಾಗಿ ಹಲವಾರು ಅಧಿಕಾರಿಗಳು ವಿದೇಶಕ್ಕೆ ಹೋಗಿ ಬಂದಿದ್ದಾರೆ. ಅವರ ತರಬೇತಿಯ ಉಪಯೋಗ ಆಗಿದೆಯೇ? ತರಬೇತಿ ಹೆಸರಲ್ಲಿ ಹಣ ವ್ಯರ್ಥ ಮಾಡಬೇಡಿ. ವಿದೇಶದಲ್ಲಿ ಕಲಿತು ಬಂದುದನ್ನು ಇಲ್ಲಿ ಚಾಲ್ತಿಗೆ ತನ್ನಿ’ ಎಂದು ಖಾರವಾಗಿಯೇ ಹೇಳಿದರು.