ಬೆಂಗಳೂರು: ತಲಘಟ್ಟಪುರದಲ್ಲಿರುವ ಕಚೇರಿಯೊಳಗಿದ್ದ ಕೀ ಕದ್ದಿದ್ದ ಕಳ್ಳರು, ಆ ಕೀಯನ್ನು ಬಳಸಿ ಕಚೇರಿ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರವಾಹನವನ್ನು ಕದ್ದುಕೊಂಡು ಹೋಗಿದ್ದಾರೆ.
ಆ ಸಂಬಂಧ ಕಚೇರಿಯ ಮಾಲೀಕ ನರಸಿಂಹ ಎಂಬುವರು ತಲಘಟ್ಟಪುರ ಠಾಣೆಗೆ ದೂರು ನೀಡಿದ್ದಾರೆ.
‘ತಿಪ್ಪಸಂದ್ರ ಬಳಿಯ ನಾರಾಯಣನಗರದಲ್ಲಿ ನರಸಿಂಹ ಅವರ ಕಚೇರಿ ಇದೆ. ಜ. 11ರಂದು ರಾತ್ರಿ 11.30 ಗಂಟೆಗೆ ಕಚೇರಿಗೆ ಬೀಗ ಹಾಕಿಕೊಂಡು ಅವರು ಮನೆಗೆ ಹೋಗಿದ್ದರು. ಕಿಟಕಿ ಬಂದ್ ಮಾಡುವುದನ್ನು ಮರೆತಿದ್ದರು. ಮರುದಿನ ಬೆಳಿಗ್ಗೆ 8 ಗಂಟೆಗೆ ಕಚೇರಿಗೆ ಬಂದಾಗಲೇ ಕಳ್ಳತನದ ವಿಷಯ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಿಟಕಿ ಮೂಲಕವೇ ಆರೋಪಿಗಳು, ಕಚೇರಿಯೊಳಗಿದ್ದ ಲ್ಯಾಪ್ಟಾಪ್ ಹಾಗೂ ದ್ವಿಚಕ್ರ ವಾಹನದ ಕೀ ಕದ್ದಿದ್ದಾರೆ. ನಂತರ, ಬೈಕ್ ತೆಗೆದುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ, ಕಚೇರಿ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.