ಬೆಂಗಳೂರು: ಕೊಂಕಣಿ ಕ್ಯಾಥೊಲಿಕ್ ಸಂಘಗಳ ಒಕ್ಕೂಟದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕೊಂಕಣ್ ಕರಾವಳಿ ಉತ್ಸವ’ದಲ್ಲಿ ಸಾಮಾಜಿಕ ಕಾರ್ಯಕರ್ತೆ ಮಾರ್ಗರೇಟ್ ಫ್ರಾನ್ಸಿಸ್ ಫುರ್ಟಾಡೊ, ರಾಜ್ಯದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ ಹಾಗೂ ಉದ್ಯಮಿ ಎಸ್.ಜಾರ್ಜ್ ಫರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.
ಮಾರ್ಗರೇಟ್ ಫ್ರಾನ್ಸಿಸ್ ಫುರ್ಟಾಡೊ, ‘ಬಡವರ ದುಃಖವನ್ನು ನಿವಾರಿಸುವುದರಲ್ಲಿಯೇ ಹೆಚ್ಚು ಸಂತೋಷವಿದೆ. ಎಲ್ಲರೂ ಕೈಲಾದಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಒಕ್ಕೂಟದ ಅಧ್ಯಕ್ಷ ಎಡ್ವರ್ಡ್ ಡಿಸೋಜ, ‘ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ, ಉತ್ತೇಜಿಸಲು ಒಕ್ಕೂಟ ಆದ್ಯತೆ ನೀಡುತ್ತಿದೆ. 21 ವರ್ಷಗಳ ಹಿಂದೆ ಒಕ್ಕೂಟ ಆರಂಭವಾದಾಗ ಕೇವಲ 6 ಸಂಘಗಳು ಇದ್ದವು. ಈಗ ರಾಜ್ಯ, ದೇಶ, ವಿದೇಶಗಳಲ್ಲಿನ ಸಮುದಾಯದ 34 ಸಂಘಗಳು ಒಕ್ಕೂಟದಲ್ಲಿವೆ’ ಎಂದರು.
‘ಒಕ್ಕೂಟದ ವತಿಯಿಂದ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಿಸಲು ಬಿಡಿಎ ನಿವೇಶನಕ್ಕಾಗಿ 5 ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದೇವೆ. ನಮಗಿನ್ನೂ ನಿವೇಶನ ಮಂಜೂರು ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಎನ್.ಎ.ಹ್ಯಾರಿಸ್, ‘ಒಕ್ಕೂಟದ ಮುಂದಿನ ವರ್ಷದ ಉತ್ಸವದ ವೇಳೆಗೆ ನಿವೇಶನ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.